ಕೋಟ: ಕ್ರಶಿಂಗ್ ಯಂತ್ರಕ್ಕೆ ಸಿಲುಕಿ ಕಾಲು ಕಳೆದುಕೊಂಡ ಯುವತಿ – ಮಿಲ್ ಮಾಲೀಕನ ವಿರುದ್ಧ ಪ್ರಕರಣ ದಾಖಲು
ಕೋಟ: ತೆಂಗಿನಕಾಯಿ ಪುಡಿ ಮಾಡುವ ಕ್ರಶಿಂಗ್ ಯಂತ್ರಕ್ಕೆ ಕಾರ್ಮಿಕ ಯುವತಿಯ ಕಾಲು ಸಿಲಿಕಿದ ಪರಿಣಾಮ ಕಾರ್ಮಿಕ ಯುವತಿ ಗಂಭೀರ ಗಾಯಗೊಂಡ ಘಟನೆ ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಕಲ್ಮರ್ಗಿಯಲ್ಲಿರುವ ಯೋಗೀಶ್ ನಾಯಕ್ ಎಂಬುವರ ಮಾಲೀಕತ್ವದ ಏಕದಂತ ಆಯಿಲ್ ಎಂಡ್ ಫ್ಲೋರ್ ಮಿಲ್ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ನಿವಾಸಿ ನಾಗರಾಜ (49) ಅವರ ಪುತ್ರಿ ಸಿಂಚನಾ (21) ಎಂಬಾಕೆಯೇ ದುರ್ಘಟನೆಯಲ್ಲಿ ಗಂಭೀರ ಗಾಯಗೊಂಡ ಯುವತಿ.
ಸಿಂಚನಾ ಅವರು ಏಕದಂತ ಆಯಿಲ್ & ಫ್ಲೋರ್ ಮಿಲ್ನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಮೇ 7ರಂದು ಬೆಳಿಗ್ಗೆ ಸುಮಾರು 10:45 ಗಂಟೆಯ ವೇಳೆಗೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಅಳವಡಿಸಲಾಗಿದ್ದ ತೆಂಗಿನಕಾಯಿ ಕ್ರಶಿಂಗ್ ಯಂತ್ರಕ್ಕೆ ಅವರ ಬಲಕಾಲು ಸಿಲುಕಿಕೊಂಡಿದೆ.
ಅಪಘಾತದ ಪರಿಣಾಮ ಸಿಂಚನಾ ಅವರ ಬಲಕಾಲಿಗೆ ತೀವ್ರ ರಕ್ತಗಾಯ ಹಾಗೂ ಮೂಳೆ ಮುರಿತ ಉಂಟಾಗಿದ್ದು, ಕಾಲು ಸಂಪೂರ್ಣವಾಗಿ ಜಜ್ಜಿಹೋಗಿರುವುದಾಗಿ ತಿಳಿದುಬಂದಿದೆ. ಸ್ಥಳದಲ್ಲಿದ್ದ ಸಹೋದ್ಯೋಗಿಗಳು ತಕ್ಷಣ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.
ಏಕದಂತ ಆಯಿಲ್ & ಫ್ಲೋರ್ ಮಿಲ್ನ ಮಾಲಕ ಯೋಗೀಶ್ ನಾಯಕ್ ಎಂಬಾತನ ಬೇಜವಾಬ್ದಾರಿತನವೇ ಈ ದುರ್ಘಟನೆಗೆ ನೇರ ಕಾರಣ ಎಂದು ಆರೋಪಿಸಲಾಗಿದೆ. ಕಾರ್ಖಾನೆಯ ಘಟಕವನ್ನು ಸರಿಯಾಗಿ ನಿರ್ವಹಿಸದೇ ಇರುವುದು ಮತ್ತು ಅತ್ಯಂತ ಅಪಾಯಕಾರಿಯಾದ ಕ್ರಶಿಂಗ್ ಯಂತ್ರಕ್ಕೆ ಯಾವುದೇ ರೀತಿಯ ಸೂಕ್ತ ಸುರಕ್ಷಾ ಕವಚವನ್ನು (Safety Guard) ಅಳವಡಿಸದೇ ಇರುವುದೇ ಘಟನೆಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.
ದುರ್ಘಟನೆ ನಡೆದ ತಕ್ಷಣ ಮಾಲೀಕ ಯೋಗೀಶ್ ನಾಯಕ್ ಆಸ್ಪತ್ರೆಯ ಎಲ್ಲಾ ಖರ್ಚು ಭರಿಸುವ ಭರವಸೆ ನೀಡಿದ್ದು, ಬಳಿಕ ಯಾವುದೇ ವೆಚ್ಚ ನೀಡದೇ ಉಡಾಫೆತನ ತೋರಿದ್ದಾನೆ ಎಂದು ಸಾರ್ವಜನಿಕರು ದೂರಿದ್ದಾರೆ. ಬಡ, ಕಾರ್ಮಿಕ ಯುವತಿಯ ಜೀವದ ಜೊತೆ ಚೆಲ್ಲಾಟವಾಡಿದ ಮಾಲೀಕನ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯುವತಿಯ ಚಿಕಿತ್ಸೆಗೆ ಈಗಾಗಲೇ ಲಕ್ಷಾಂತರ ರುಇಪಾಯಿ ಖರ್ಚಾಗಿದ್ದು ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ಸಂಇಚನಾ ತಂದೆ ನಾಗರಾಜ್ ನೀಡಿದ ದೂರಿನ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2026 ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 289 ಹಾಗೂ 125(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
