ಕೋಟೇಶ್ವರ: ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ನಿಂದ ಸೇವಾ ಸಂಕಲ್ಪ| ಒಂದು ಕೋಟಿ ಶೈಕ್ಷಣಿಕ ಧನಸಹಾಯ ವಿತರಣೆ | ಪ್ರತಿಭೆಗಳಿಗೆ ಸಂಪತ್ ಕುಮಾರ್ ಶೆಟ್ಟಿ ಮಾರ್ಗದರ್ಶನ ಶ್ಲಾಘನೀಯ – ಸಂಸದ ಕೋಟ

ಕುಂದಾಪುರ: ಒಂದು ಕಾಲದಲ್ಲಿ ಸೀಮಿತವಾಗಿದ್ದ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಇಂದಿನ ಕಾಲಘಟ್ಟದಲ್ಲಿ ಬದಲಾಗಿದೆ. ಪ್ರತಿಭೆ, ಶಕ್ತಿ ಹಾಗೂ ಓದಬೇಕೆಂಬ ಛಲದೊಂದಿಗೆ ಮುನ್ನುಗ್ಗುವ ಮನಸ್ಸುಗಳಿಗೆ ಇಂದು ಸಂಪತ್ ಕುಮಾರಗ ಶೆಟ್ಟಿಯಂತಹಾ ದಾನಿಗಳು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಒಂದು ಕೋಟಿ ರೂಪಾಯಿವರೆಗಿನ ಆರ್ಥಿಕ ನೆರವನ್ನು ಒಂದೇ ವೇದಿಕೆಯಲ್ಲಿ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜೂನ್ 14ರ ಭಾನುವಾರ ಬೆಳಿಗ್ಗೆ ಕೋಟೇಶ್ವರದ ಯುವ ಮೆರಿಡಿಯನ್ ಗ್ರಾಮ್ಮಿ ಬಾಲ್ ರೂಮ್ ಸಭಾಂಗಣದಲ್ಲಿ ವಂಡಾರಿನ ಶ್ರೀ ಕೃಷ್ಣ ಪ್ರಸಾದ್ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸೇವಾ ಸಂಕಲ್ಪ ಸಹಾಯ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಂಪತ್ ಕುಮಾರ್ ಶೆಟ್ಟಿ ತಮ್ಮ ಉದ್ಯಮದಲ್ಲಿ ಬರುವ ಆದಾಯದ ಒಂದು ಭಾಗವನ್ನು ಸಮಾಜ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿರುವುದು ಶ್ಲಾಘನೀಯ ಎಂದರು.








ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ವ್ಯವಸ್ಥಾಪಕ ನಿರ್ದೇಶಕ ಸಂಪತ್ ಕುಮಾರ್ ಶೆಟ್ಟಿ, ಶಿಕ್ಷಣದ ಹಸಿವಿರುವ ಬಡ ಮಕ್ಕಳು ಅತ್ಯುನ್ನತ ಸ್ಥಾನಕ್ಕೇರಿದಾಗ ಬದಲಾವಣೆ ಸಾಧ್ಯ. 2012ರಲ್ಲಿ ಆರಂಭವಾದ ‘ಕೃಷ್ಣ ಪ್ರಸಾದ್ ಕ್ಯಾಶ್ಯೂಸ್’ ಸದೃಢವಾಗಿ ಬೆಳೆಯಲು ಸಿಬ್ಬಂದಿ ವರ್ಗದ ಕಠಿಣ ಪರಿಶ್ರಮ ಕಾರಣ. ಪ್ರತೀ ಸಿಬ್ಬಂದಿಯ ಬೆವರಿನ ಹನಿಗೂ ನಾನು ಕೃತಜ್ಞನಾಗಿದ್ದೇನೆ ಎಂದವರು, ಬಡ, ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದು ಕೋಟಿ ರೂಪಾಯಿಗಳ ನಿಧಿಯನ್ನು ಕಾದಿರಿಸಲಾಗಿದ್ದು, ಶೇ. 80ರಷ್ಟನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಲಾಗುವುದು. ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಭಾರತೀಯ ಆಡಳಿತಾತ್ಮಕ ಸೇವೆಗಳಾದ ಐಎಎಸ್, ಐಆರ್ಎಸ್ ಅಥವಾ ಐಪಿಎಸ್ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಜಿಲ್ಲೆಯ ಪ್ರಗತಿಗೆ ಕೊಡುಗೆ ನೀಡಬೇಕು ಎನ್ನುವುದು ನನ್ನ ದೊಡ್ಡ ಕನಸು. ಆ ನಿಟ್ಟಿನಲ್ಲಿ ಸಾಧನೆ ಮಾಡಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಆರ್ಥಿಕ ನೆರವು ನೀಡಲು ನಾನು ಸದಾ ಸಿದ್ಧ ಎಂದರು.






ಇದೇ ಸಂದರ್ಭ ವಿವಿಧ ಶಾಲೆಗಳಿಗೆ ಕಂಪ್ಯೂಟರ್ಗಳನ್ನು ವಿತರಿಸಲಾಯಿತು. ಶಿಕ್ಷಣ ದತ್ತು ಯೋಜನೆಯಡಿ 10 ವಿದ್ಯಾರ್ಥಿಗಳಿಗೆ ಹಾಗೂ 24 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಚೆಕ್ಗಳನ್ನು ಹಸ್ತಾಂತರಿಸಲಾಯಿತು. ದೀನಬಂಧು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ (ವಂಡಾರು) ಹಾಗೂ ಮಹಾತ್ಮ ಗಾಂಧಿ ಪ್ರೌಢಶಾಲೆ (ಸಾಯಬ್ರಕಟ್ಟೆ) ಸಂಸ್ಥೆಗಳ ಅತಿಥಿ ಶಿಕ್ಷಕರ ವಾರ್ಷಿಕ ವೇತನಕ್ಕಾಗಿ ಧನಸಹಾಯದ ಚೆಕ್ಗಳನ್ನು ವಿತರಿಸಲಾಯಿತು.









ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಪತ್ರಕರ್ತ ಕೆ. ಸಿ. ರಾಜೇಶ್, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ್ ಶೆಟ್ಟಿ ಕೊತ್ತಾಡಿ ಹಾಗೂ ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್, ಸೊನಾಲಿ ಎಸ್. ಶೆಟ್ಟಿ, ಯುವ ಮೆರಿಡಿಯನ್ ಸಂಸ್ಥೆಯ ಉದಯಕುಮಾರ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳು ಪ್ರಾರ್ಥಿಸಿ, ಕೃಷ್ಣಪ್ರಸಾದ್ ಸ್ಟೀಲ್ಸ್ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀನಿವಾಸ ಶೆಟ್ಟಿ ವಂದಿಸಿದರು. ಎಳ್ಳಂಪಳ್ಳಿ ಸಂತೋಷ ಶೆಟ್ಟಿ ನಿರೂಪಿಸಿದರು.
