ಉಡುಪಿಯಲ್ಲಿ ಇನ್ಮುಂದೆ ಅಭಿವೃದ್ಧಿಯ ಮತದಾನ ನಡೆಯುತ್ತದೆ – ಜೆ.ಪಿ.ಹೆಗ್ಡೆ

ಸಾಲಿಗ್ರಾಮ: ಲೋಕಸಭಾ ಚುನಾವಣೆಯ ಮೂಲಕ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಆಧಾರಿತ ಚುನಾವಣೆ ನಡೆಯುವ ಮೂಲಕ ಕಾಂಗ್ರೆಸ್ ಗೆಲುವಿನೊಂದಿಗೆ ಹಣ ಮತ್ತು ಅಧಿಕಾರದ ಚುನಾವಣೆ ಅಂತ್ಯಗೊಳ್ಳಲಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಸಾಲಿಗ್ರಾಮದಲ್ಲಿರುವ ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಲಿಗ್ರಾಮ ಸ್ಥಾನೀಯ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಸಂಸದ, ಸಚಿವ, ಶಾಸಕ ಆಗಿದ್ದೇ ಎನ್ನುವುದಕ್ಕಿಂತ ಆ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತೇನೆ ಎಂದ ಅವರು, ಅಧಿಕಾರ ಇದ್ದಾಗಲೂ ಇಲ್ಲದೇ ಇದ್ದಾಗಲೂ ಕ್ಷೇತ್ರದ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದರು.

ನಾಯಕರ ಹೆಸರಿನಲ್ಲಿ ಮತವನ್ನು ಕೇಳಿ ಗೆದ್ದು ಬರುವವರ ಮತ್ತೆ ಜನರ ಮುಂದೆ ಬರುವುದು 5 ವರ್ಷಗಳ ಬಳಿಕ. ಅಲ್ಲಿಯವರೆಗೆ ಮತದಾರರ ಕಡೆಗೆ ತಿರುಗಿಯೂ ನೋಡುವುದಿಲ್ಲ. ಇದು ನಿಮಗೆಲ್ಲರಿಗೂ ಗೊತ್ತಿರುವ ಸತ್ಯ. ಆದುದರಿಂದ ನೀವು ಮತದಾನದ ಮೂಲಕ ಆಯ್ಕೆ ಮಾಡುವಾಗಲೇ ಈ ಬಗ್ಗೆ ಎಚ್ಚರಿಕೆಯಿಂದ ಮತದಾನ ಮಾಡಬೇಕಿದೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನವಿಲುಗರಿ ಮರಿ ಹಾಕದು ಎಂದು ಲೇವಡಿ ಮಾಡಿದ್ದ ಬಿಜೆಪಿ, ಈಗ ಸರ್ಕಾರದ ಬೊಕ್ಕಸ ಲೂಟಿಯಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಬಿಜೆಪಿ ನಾಯಕರು ನಿಮ್ಮ ಮನೆ ಬಾಗಿಲಿಗೆ ಬಂದರೆ “ಕೇಂದ್ರ ಸರಕಾರ 11 ಲಕ್ಷ ಕೋಟಿ ಉದ್ದಿಮೆದಾರರ ಸಾಲ ಮನ್ನಾ ಮಾಡಿದಾಗ ಕೇಂದ್ರದ ಬೊಕ್ಕಸ ಲೂಟಿಯಾಗಿಲ್ಲವೇ? ಎಂದು ನೀವೆಲ್ಲರೂ ಪ್ರಶ್ನಿಸಬೇಕು ಎಂದರು.

ಕೋಟ ಶ್ರೀನಿವಾಸ ಪೂಜಾರಿ ಕಲ್ಲಡ್ಕ ಪ್ರಭಾಕರ್ ಭಟ್ಟರ ಏಜೆಂಟ್ ಎಂದ ಕೆ. ಗೋಪಾಲ ಪೂಜಾರಿ. ಅಧಿಕಾರವಿದ್ದಾಗ ಬಿಲ್ಲವರ ಪರ ಕೆಲಸವನ್ನಾಗಲೀ, ಸಾಮಾಜಿಕ ನ್ಯಾಯವನ್ನಾಗಲೀ ಒದಗಿಸಿಲ್ಲ. ನನ್ನನ್ನು ಭಯೋತ್ಪಾದಕ ಎಂದರು. ನನ್ನ 30 ವರ್ಷದ ರಾಜಕಾರಣದಲ್ಲಿ ಯಾವುದೇ ಅನ್ಯಾಯದ ಕೆಲಸ ಮಾಡಿಲ್ಲ. ನಾನು ನನ್ನ ಆಸ್ತಿ, ಹೊಟೇಲ್ ಮಾರಿ ರಾಜಕಾರಣ ಮಾಡಿದ್ದೇನೆ. ಆದರೆ ಯಾವತ್ತೂ ನಾನು ಬಡವ, ಸರಳ ಎಂದು ಮತದಾರರ ಅನುಕಂಪ ಗಳಿಸಿಲ್ಲ ಎಂದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಮಹಿಳಾ ಕಾಂಗ್ರೆಸ್ನ ರೇಖಾ, ಪ್ರಮುಖರಾದ ಶ್ರೀನಿವಾಸ ಅಮೀನ್, ತಿಮ್ಮ ಪೂಜಾರಿ, ವಿನಯಕುಮಾರ್ ಕಬ್ಯಾಡಿ, ಆಮ್ ಆದ್ಮಿ ಪಕ್ಷದ ಆಶ್ಲಿ ಸೀನ್ ಕರ್ನೆಲಿಯೋ ಮೊದಲಾದವರಿದ್ದರು.
