ಮಳಿಗೆಯಲ್ಲಿ ಕಳವು ಯತ್ನ: ಮೂರು ತಿಂಗಳ ಬಳಿಕ ಮೂವರು ಆರೋಪಿಗಳ ಬಂಧನ
ಕುಂದಾಪುರ: ಕಳೆದ ವರ್ಷ ಡಿಸೆಂಬರ್ ನಲ್ಲಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಎಂಬಲ್ಲಿ ಇರುವ ಶಾನುಭೋಗು ಕಾಂಪ್ಲೆಕ್ಸ್ನಲ್ಲಿರುವ ಆಭರಣ ಮಳಿಗೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಮುಸುಕುಧಾರಿಗಳ ತಂಡವನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಗಳೂರಿನ ನಂತೂರು ನಿವಾಸಿ ಮೊಹಮ್ಮದ್ ಅರ್ಷದ್ (23), ಬೈಂದೂರು ಪಡುವರಿ ನಿವಾಸಿ ರಿಜ್ವಾನ್ (24), ಬೈಂದೂರಿನ ಪಡುವರಿ ನಿವಾಸಿ ಮೊಹಮ್ಮದ್ ಅರ್ಬಾಜ್ (23). ಹಾಗೂ ಅರ್ಶಿತ್ ಅವಿನಾಶ್ ದೊಡ್ರೆ ಎಂದು ಗುರುತಿಸಲಾಗಿದೆ.

2023ರ ಡಿಸಿಎಂಬರ್ ನಲ್ಲಿ ತೆಕ್ಕಟ್ಟೆ ಕೆನರಾ ಬ್ಯಾಂಕ್ ಬಳಿಯ ಸಮೃದ್ಧಿ ಸಂಕೀರ್ಣಕ್ಕೆ ಒಳನುಗ್ಗಿದ ಕಳ್ಳರ ತಂಡ, ಮೀನಾಕ್ಷಿ ಫರ್ನಿಚರ್ ಶೋರೂಮ್, ಗೋಡೌನ್ ಮತ್ತು ಟೈಲರ್ ಅಂಗಡಿಯ ಶಟರನ್ನು ಬಲವಂತವಾಗಿ ತೆರೆದು ಕಳ್ಳತನ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದರು. ಘಟನೆ ನಡೆದ ಸಂದರ್ಭ ಸ್ಥಳದಲ್ಲಿದ್ದ ಸಿಸಿಟಿವಿ ಫೂಟೇಜ್ ಆಧರಿಸಿದ ಪೊಲೀಸರು ಆರೋಪಿಗಳ ಬೆನ್ನು ಹತ್ತಿದ್ದರು. ಒಂದು ತಿಂಗಳ ಹಿಂದೆಯೂ ಇದೇ ತಂಡ ಹಳ್ಳಾಡಿಯ ರೆಸ್ಟೋರೆಂಟ್ ಮತ್ತು ಬೇಕರಿ, ಮೂರುಕೈಯ ಮೆಡಿಕಲ್ ಶಾಪ್, ಸಾಯಿಬ್ರಕಟ್ಟೆಯ ಹೊಟೇಲ್ ನಲ್ಲಿ ಕಳ್ಳತನಕ್ಕೆ ಯತ್ನಿಸಿ, ಹಣ ಮತ್ತು ಮದ್ಯದ ಬಾಟಲಿಗಳನ್ನು ಕದ್ದೊಯ್ದಿದ್ದರು.
ಕಾರ್ಯಾಚರಣೆಯಲ್ಲಿ ಕೋಟ ಠಾಣೆಯ ಪಿಎಸ್ ಐ ಸುಧಾ ಪ್ರಭು, ಎಎಸ್ ಐ ರವಿಕುಮಾರ್, ಸಿಬ್ಬಂದಿಗಳಾದ ಪ್ರಸನ್ನ ಮಾಲಾಡಿ, ವಿಜೇಂದ್ರ, ರಾಘವೇಂದ್ರ, ಗಣೇಶ್, ರೇವತಿ ಭಾಗವಹಿಸಿದ್ದರು.
