ಕೊಲ್ಲೂರು ಅಪಘಾತ – ಸಾವನ್ನಪ್ಪಿದ ಮಹಿಳೆಯ ಚಿನ್ನಾಭರಣ ಕಳವು ಆರೋಪಿ ಸೆರೆ
ಕುಂದಾಪುರ: ಮೇ 17ರ ಭಾನುವಾರ ಕೊಲ್ಲೂರು ಗ್ರಾಮ ವ್ಯಾಪ್ತಿಯ ದಳಿ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಘಟನಾ ಸ್ಥಳದಲ್ಲಿ ಮೃತಪಟ್ಟ ಮಹಿಳೆಯೋರ್ವರ ಮೈಮೇಲಿನ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪಿಯನ್ನು ಬಂಧಿಸಿ ಕಳವುಗೈಯಲಾದ ಚಿನ್ನಾಭರಣಗಳನ್ನು ಕೊಲ್ಲೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ನಿವಾಸಿ ನರಸಿಂಹ ಶೆಟ್ಟಿ ಎಂಬಾತನ ಮಗ ಹೇಮಂತ(40) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿದ್ದಾರೆ ಎಂಬುದಾಗಿ ಮೃತ ಮಹಿಳೆಯ ಸಂಬಂಧಿ ಶ್ರೀಕುಮಾರ ಎಂಬುವವರು ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಕೊಲ್ಲೂರು ಠಾಣಾಧಿಕಾರಿ ವಿನಯ ಎಂ. ಕೊರ್ಲಹಳ್ಳಿ, ಸಿಬ್ಬಂದಿಗಳಾದ ನಾಗೇಂದ್ರ ಹೆಚ್ಸಿ, ಲಕ್ಷ್ಮಣ ಗಾಣಿಗ ಹೆಚ್ಸಿ, ರಾಘವೇಂದ್ರ ಹೆಚ್ಸಿ, ನಾಗರಾಜ ಪಿಸಿ ತಂಡ ಸಿಸಿಟಿವಿ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದ ವಿವಿಧ ಫೊಟೋಗಳು ಮತ್ತು ತಾಂತ್ರಿಕ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಹೇಮಂತನಿಂದ 57 ಸಾವಿರ ರೂಪಾಯಿ ಮೌಲ್ಯದ 3.910 ಗ್ರಾಂ ತೂಕದ 1 ಉಂಗುರ, 50 ಸಾವಿರ ರೂಪಾಯಿ ಮೌಲ್ಯದ 3.450 ಗ್ರಾಂ ತೂಕದ 1 ಬಳೆ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ 7.160 ಗ್ರಾಂ ತೂಕದ 1 ಸರ ಸೇರಿದಂತೆ ಎರಡು ಲಕ್ಷದ ಏಳು ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಹೇಮಂತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತನಿಖೆ ಮುಂದುವರೆದಿದೆ.
