*ಕೊಲ್ಲೂರು: ಜೀಪಿಗೆ ಇನ್ಸುಲೇಟರ್ ಡಿಕ್ಕಿ ಕೊಡಚಾದ್ರಿಯಿಂದ ಬರುತ್ತಿದ್ದ ಕೇರಳ ಮೂಲದ ಇಬ್ಬರು ಸಾವು, ಎಂಟು ಜನ ಗಂಭೀರ!*
ಕುಂದಾಪುರ: ಮೀನು ತುಂಬಿಕೊಂಡು ಬರುತ್ತಿದ್ದ ಇನ್ಸುಲೇಟರ್ ವಾಹನವೊಂದು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು ಬರುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಕೊಚಾದ್ರಿ ಚಾರಣ ಮುಗಿಸಿಕೊಂಡು ಬರುತ್ತಿದ್ದ ಎಂಟು ಮಂದಿ ಪ್ರವಾಸಿಗರ ಪೈಕಿ ಇಬ್ಬರು ಗಾಯಗೊಂಡು ಚಾಲಕ ಸಹಿತ ಏಳು ಜನ ಗಂಭೀರ ಗಾಯಗೊಂಡ ಘಟನೆ ಕೊಲ್ಲೂರು ನಿಟ್ಟೂರು ನಡುವಿನ ದಳಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಡೆದಿದೆ.


ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಕೇರಳ ರಾಜ್ಯದ ಕೊಟ್ಟಾಯಂನ ಪಾಲ ನಿವಾಸಿಗಳಾದ ಜ್ಯೋತಿ ಹಾಗೂ ಆರ್ಯ(೨೮) ಎಂದು ಅಂದಾಜಿಸಲಾಗಿದೆ. ಉಳಿದಂತೆ ಗಂಭೀರ ಗಾಯಗೊಂಡವರನ್ನು ಅವಿನಿ (3 ತಿಂಗಳು), ಅನೂಪ್ (5), ಅರ್ಜುನ್ (9) ಕೆಎಂಸಿ, ಮಿನಿ (24) ಕೆಎಂಸಿ, ಎಬಿ (36), ಜ್ಯೋತಿಷ್ (43), ಅನೂಪ್ (46) ಹಾಗೂ ಜೀಪಿನ ಚಾಲಕ ದೇವರಾಜ್ ಎಂದು ಗುರುತಿಸಲಾಗಿದೆ.


ಎಲ್ಲರೂ ಭಾನುವಾರ ಬೆಳಿಗ್ಗೆ ದೇವರಾಜ್ ಎನ್ನುವವರ ಬಾಡಿಗೆ ಜೀಪಿನಲ್ಲಿ ಕೊಡಚಾದ್ರಿಗೆ ಹೋಗಿದ್ದರು. ಕೊಡಚಾದ್ರಿ ವೀಕ್ಷಣೆಯ ಬಳಿಕ ವಾಪಾಸ್ಸಾಗುತ್ತಿದ್ದ ವೇಳೆ ಕೊಲ್ಲೂರು ನಿಟ್ಟೂರು ರಸ್ತೆಯಲ್ಲಿ ಬರುತ್ತಿದ್ದರು. ದಳಿ ಎಂಬಲ್ಲಿ ಬರುತ್ತಿದ್ದಾಗ ಅಪರಿಚಿತ ಚಾಲಕ ಚಲಾಯಿಸುತ್ತಿದ್ದ ಮೀನು ತುಂಬಿದ ಇನ್ಸುಲೇಟರ್ ಎದುರಿನಿಂದ ಹೋಗುತ್ತಿದ್ದ ವಾಹನವೊಂದನ್ನು ಏಕಾಏಕೀ ಓವರ್ಟೇಕ್ ಮಾಡಲು ಯತ್ನಿಸಿದ್ದಾನೆ. ಅಪಘಾತದ ಸಾಧ್ಯತೆಗಳನ್ನು ಗಮನಿಸಿದ ಜೀಪ್ ಚಾಲಕ ಜೀಪನ್ನು ನಿಲ್ಲಿಸಿದ್ದಾನೆ. ಆದರೆ ವೇಗವಾಗಿ ಬಂದ ಇನ್ಸುಲೇಟರ್ ನಿಂತ ಜೀಪಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇನ್ಸುಲೇಟರ್ ವಾಹನ ಜೀಪನ್ನು ಸುಮಾರು ಮೂರು ಮೀಟರ್ ಹಿಂದಕ್ಕೆ ಎಳೆದುಕೊಂಡು ಹೋಗಿದೆ.


ಗಂಭೀರ ಗಾಯಗೊಂಡವರನ್ನು ಸ್ಥಳಿಯ ಜೀಪು ಚಾಲಕರಾದ ಶ್ರೀಧರ್ ಸಹಿತ ಮೂರು ಜನ ಚಾಲಕರು, ಜಡ್ಕಲ್ ನಿವಾಸಿ ಬಿಜು ಜಡ್ಕಲ್ ಅವರು ತಮ್ಮಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದರು. ಅಂಬ್ಯುಲೆನ್ಸ್ ಚಾಲಕರಾದ ಸಾಬು ಹಾಗೂ ಇಬ್ರಾಹಿ ಗಂಗೊಳ್ಳಿ ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ದರು.


ಕೇರಳದಿಂದ ನಲವತ್ತು ಜನರ ತಂಡ ಶನಿವಾರ ಬಸ್ಸಿನಲ್ಲಿ ಉಡುಪಿ, ಮುರುಡೇಶ್ವರ ಪ್ರವಾಸ ಮುಗಿಸಿಕೊಂಡು ರಾತ್ರಿ ಕೊಲ್ಲೂರಿನ ಧರ್ಮಪೀಠದಲ್ಲಿ ಉಳಿದುಕೊಂಡಿದ್ದರು. ಭಾನುವಾರ ಕೊಲ್ಲೂರು ದೇವಿಯ ದರ್ಶನ ಮುಗಿಸಿಕೊಂಡು ಪರಶಿನಕಡವು ಮೂಲಕ ಕೇರಳಕ್ಕೆ ಪ್ರಯಣಿಸುವವರಿದ್ದರು. ಆದರೆ ವಿಧಿಯ ಕ್ರೂರತೆಯಿಂದಾಗಿ ನಲವತ್ತು ಜನರ ಪೈಕಿ ಒಂಭತ್ತು ಜನ ಆಸ್ಪತ್ರೆ ಸೇರುವಂತಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
