ಎಸ್ಸೆಸ್ಸೆಲ್ಸಿ ಪರೀಕ್ಷೆ : ಉತ್ತರ ಪತ್ರಿಕೆ ಪ್ರತಿ ಹಂಚಿಕೆಯಲ್ಲಿ ಇಲಾಖೆ ಎಡವಟ್ಟು! ಆತಂಕದಲ್ಲಿ ವಿದ್ಯಾರ್ಥಿ- ಪೋಷಕರು
ಕುಂದಾಪುರ: ಎಪ್ರಿಲ್ 2 ರಂದು ಮುಕ್ತಾಯಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಎಪ್ರಿಲ್ 23ರಂದೇ ಬಿಡುಗಡೆಗೊಳಿಸಲಾಯಿತಾದರೂ ಉತ್ತರ ಪರೀಕ್ಷೆಯ ನಕಲು ಪ್ರತಿ ನೀಡುವಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಹಾ ಎಡವಟ್ಟುಗಳು ನಡೆದಿರುವುದು ಬೆಳಿಕಿಗೆ ಬಂದಿದೆ.

ಮಂಡಳಿಯ ನಿಯವಮದಂತೆ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಹಣ ಪಾವತಿ ಮಾಡಿದ್ದರೂ ಮಂಡಳಿ ವೆಬ್ ಸೈಟ್ ನಲ್ಲಿ ಯಾರದೋ ವಿದ್ಯಾರ್ಥಿಗೆ ಇನ್ಯಾರದೋ ಉತ್ತರ ಪತ್ರಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದೆ. ಸೈಬರ್ ಸೆಂಟರ್ ನಲ್ಲಿ ಹೋಗಿ ಹಣ ಕೊಟ್ಟು ಉತ್ತರ ಪತ್ರಿಕೆ ಡೌನ್ ಲೋಡ್ ಮಾಡಿಕೊಳ್ಳುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಇದರಿಂದ ಆತಂಕ ಸೃಷ್ಟಿಯಾಗಿದೆ.
ಉತ್ತರ ಪತ್ರಿಕೆ ನಕಲು ಪ್ರತಿ ಪಡೆಯಲು ಅಂತಿಮ ದಿನಾಂಕ ನಿಗಧಿಗೊಳಿಸಿದ ಶಿಕ್ಷಣ ಇಲಾಖೆ ತಡವಾಗಿ ಅರ್ಜಿ ಸಲ್ಲಿಸಿದವರಿಗೆ ದಂಡ ವಿಧಿಸುತ್ತದೆ. ಆದರೆ ಇಲಾಖೆ ಮಾಡಿದ ಎಡವಟ್ಟುಗಳಿಂದಾಗಿ ಸಮಸ್ಯೆ, ಗೊಂದಲ ಎದುರಿಸುತ್ತಿರುವ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಹಾರ ನೀಡುವವರು ಯಾರು ಎನ್ನುವ ಪ್ರಶ್ನೆಗೆ ಶಿಕ್ಷಣ ಸಚಿವರು ಉತ್ತರ ನೀಡಬೇಕಿದೆ. ಮಕ್ಕಳು ದೇಶದ ಭವಿಷ್ಯ ಎನ್ನುವ ಸ್ಲೋಗನ್ ಹೇಳುವ ಶಿಕ್ಷಣ ಇಲಾಖೆಯೇ ಇಂತಹಾ ಎಡವಟ್ಟುಗಳನ್ನು ಮಾಡಿದರೆ, ಇಷ್ಟೊಂದು ಬೇಜವಾಬ್ದಾರಿತನ ತೋರುವ ಮಂಡಳಿಯ ಅಧಿಕಾರಿಗಳ ವಿರುದ್ಧ ಕ್ರಮ ಯಾಕಿಲ್ಲ ? ಎನ್ನುವ ಆಕ್ರೋಶ ಎಲ್ಲೆಡೆ ಕೇಳಿ ಬರುತ್ತಿದೆ.
ಅಲ್ಲದೇ ಮಂಡಳಿಯ ಈ ಎಡವಟ್ಟುಗಳಿಂದಾಗಿ ಮರು ಮೌಲ್ಯಮಾಪನಕ್ಕೂ ಸಮಸ್ಯೆಗಳಾಗುತ್ತಿದ್ದು, ಮರುಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ತಕ್ಷಣವೇ ಶಿಕ್ಷಣ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಇಂತಹಾ ಎಡವಟ್ಟುಗಳು ನಡೆಯದಂತೆ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಬೇಕಾಗಿದೆ.
