ಸಿದ್ಧಾಪುರ: ಎಸ್ಸೆಸ್ಸೆಲ್ಸಿ ಗುಣಮಟ್ಟದ ಶಿಕ್ಷಣದ ಫಲಿತಾಂಶದಲ್ಲಿ ಸರಸ್ವತಿ ವಿದ್ಯಾಲಯ ತಾಲೂಕಿಗೆ ಪ್ರಥಮ
ಕುಂದಾಪುರ: ಎಪ್ರಿಲ್ 23ರಂದು ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಗುಣಮಟ್ಟದ ಫಲಿತಾಂಶದಲ್ಲಿ ಕುಂದಾಪುರ ತಾಲೂಕಿನ ಸಿದ್ಧಾಪುರದ ಸರಸ್ವತಿ ವಿದ್ಯಾಲಯ (ಅನುದಾನ ರಹಿತ) ಆಂಗ್ಲ ಮಾಧ್ಯಮ ಪ್ರೌಢಶಾಲೆಯು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಕುಂದಾಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವರದಿ ತಿಳಿಸಿದೆ. ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯಿಂದ ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 13 ವಿದ್ಯಾರ್ಥಿಗಳು, 22 ವಿದ್ಯಾರ್ಥಿನಿಯರು ಸೇರಿದ್ದು, ಶೇ. 100 ಫಲಿತಾಂಶ ಬಂದಿದೆ. ಶೇ. 95.48 ಗುಣಮಟ್ಟದ ಶಿಕ್ಷಣ ಫಲಿತಾಂಶ ಲಭಿಸಿದೆ.

ಇನ್ನು ಎರಡನೇ ಸ್ಥಾನವನ್ನು ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ ಪಡೆದುಕೊಂಡಿದ್ದು, 125 ವಿದ್ಯಾರ್ಥಿಗಳು ಹಾಗೂ 136 ವಿದ್ಯಾರ್ಥಿನಿಯರು ಸೇರಿದಂತೆ 261 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಶೇ. 100 ಫಲಿತಾಂಶದೊಂದಿಗೆ ಶೇ 95.46 ಗುಣಮಟ್ಟದ ಫಲಿತಾಂಶ ಲಭಿಸಿದೆ. ಶಂಕರನಾರಾಯಣದ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಶೇ. 94.90 ಗುಣಮಟ್ಟದ ಶಿಕ್ಷಣ ಫಲಿತಾಂಶದೊಂದಿಗೆ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವರದಿ ತಿಳಿಸಿದೆ.
