ಸಿದ್ಧಾಪುರ: ಸರ್ಕಾರೀ ಶಾಲೆಗಳ ಮೂಲಸೌಲಭ್ಯ ಅಭಿವೃದ್ಧಿಯಾದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಾಧ್ಯ –
ಪ್ರಯೋಗಾಲಯ ಪೀಠೋಪಕರಣ ಕೊಡುಗೆ ನೀಡಿದ ಬಿ.ಎಸ್.ಸುರೇಶ್ ಶೆಟ್ಟಿ ಅಭಿಪ್ರಾಯ




ಸಿದ್ಧಾಪುರ: ಹಳ್ಳಿ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು ದೊರಕಿದಾಗ ಗ್ರಾಮೀಣ ವಿದ್ಯಾರ್ಥಿಗಳು ಸಮರ್ಪಕ ಶಿಕ್ಷಣ ಪಡೆಯುವ ಮೂಲಕ ುನ್ನತ ಶಿಕ್ಷಣಕ್ಎ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಖಾಸಗೀ ಶಿಕ್ಷಣ ಕ್ಷೇತ್ರದ ಜೊತೆಗೆ ಸರ್ಕಾರೀ ಶಾಲೆಗಳ ಅಭಿವೃದ್ಧಿಗೆ ತನನ ಶಕ್ತಿ ಮೀರಿ ಪ್ರಯತ್ನಿಸುತ್ತದೆ ಎಂದು ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಸಿದ್ಧಾಪುರ ಇದರ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಹೇಳಿದ್ದಾರೆ. ಅವರು ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಸಂಸ್ಥೆಯಿಂದ ಸಿದ್ಧಾಪುರ ಸರ್ಕಾರೀ ಪ್ರೌಢ ಶಾಲೆಗೆ ಉಚಿತವಾಗಿ ನೀಡಲಾದ ವಿಜ್ಞಾನ ಪ್ರಯೋಗಾಲಯಗಳ ಪೀಠೋಪಕರಣಗಳನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.





ಇದೇ ಸಂದರ್ಭದಲ್ಲಿ ಜ್ಞಾನಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ ಮಾತನಾಡಿ, ಇದೀಗ ಗ್ರಾಮೀಣ ಭಾಗವಾದ ಸಿದ್ಧಾಪುರದಲ್ಲಿ ಸುಸಜ್ಜಿತ ಪದವಿ ಪೂರ್ವ ಕಾಲೇಜು ಆರಂಭಗೊಂಡಿದ್ದು, ಸುತ್ತ ಮುತ್ತಲಿನ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.





ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿದ್ಧಾಪುರ ಗ್ರಾಮ ಪಂಚಾಯತ್ ನ ನಿಕಟಪೂರ್ವ ಸದಸ್ಯ ಶ್ರೀಕಾಂತ್ ನಾಯಕ್ ಮಾತನಾಡಿ, ಖಾಸಗೀ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಸುಮುಖ ಎಜ್ಯುಕೇಷನಲ್ ಟ್ರಸ್ಟ್ ಜ್ಞಾನಸರಸ್ವತಿ ಪದವಿ ಪೂರ್ವ ಕಾಲೇಜು ತೆರೆದಿರುವುದು ಸಿದ್ಧಾಪುರದ ಸುತ್ತಮುತ್ತಲ ಜನರ ಭಾಗ್ಯ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ತೆರೆಯುವ ಧೈರ್ಯ ಮಾಡಿದ ಬಿ.ಎಸ್. ಸುರೇಶ್ ಶೆಟ್ಟಿಯವರ ಜೊತೆಗೆ ನಾವೆಲ್ಲರೂ ನಿಲ್ಲಬೇಕು. ಆ ಮೂಲಕ ಸರ್ಕಾರೀ ಶಾಲೆಗಳ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.




ಇದೇ ಸಂದರ್ಭ ದಾನಿಗಳಾದ ಬಿ.ಎಸ್.ಸುರೇಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಜ್ಣಾನಸರಸ್ವತಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಹರ್ಷ ಶೆಟ್ಟಿ ಆಜ್ರಿ, ಎಸ್.ಡಿಎಂಸಿ ಸದಸ್ಯರಾದ ಅಮೃತಾ, ರೇಖಾ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಪ್ರಬಾರ ಮುಖ್ಯೋಪಾದ್ಯಾಯ ಉದಯಕುಮಾರ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕ ಸನತ್ ಕುಮಾರ್ ಶೆಟ್ಟಿ ವಂದಿಸಿದರು. ಶಿಕ್ಷಕಿ ವಸಂತಿ ಭಟ್ ನಿರೂಪಿಸಿದರು.
