ಕರಾವಳಿಗರ ಹೊಟೇಲ್ ಉದ್ಯಮಕ್ಕೆ ಕತ್ತರಿ ಹಾಕಿದ ಅನಿಲ ಪೂರೈಕೆದಾರರು – ಸಂಸದ ಕೋಟ ಮಧ್ಯಪ್ರವೇಶಿಸುವಂತೆ ನಾಗೇಂದ್ರ ಪುತ್ರನ್ ಆಗ್ರಹ


ಕುಂದಾಪುರ: ಅಮೇರಿಕಾ ಇರಾನ್ ಯುದ್ಧವನ್ನೇ ಬಂಡವಾಳವಾಗಿಸಿಕೊಂಡಿರುವ ಭಾರತದ ಆಯಿಲ್ ಕಂಪೆನಿಗಳು ಅನಿಲ ಸರಬರಾಜಿನ ಕೃತಕ ಅಭಾವ ಸೃಷ್ಟಿಸಿದ್ದು, ಕರಾವಳಿ ಹೊಟೇಲ್ ಉದ್ಯಮಿಗಳ ಸಮಸ್ಯೆಗಳಿಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.
ಕರ್ನಾಟಕ ಕರಾವಳಿ ಭಾಗದ ಬಹುತೇಕ ಕುಟುಂಬಗಳು ಹೋಟೆಲ್ ಉದ್ಯಮವನ್ನೇ ನಂಬಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಯುದ್ಧದ ನೆಪದಲ್ಲಿ ದೇಶದ ತೈಲ ಹಂಚಿಕೆ ಕಂಪೆನಿಗಳು ಅನಿಲ ಸರಬರಾಜು ಮಾಡುತ್ತಿಲ್ಲ. ಇದರಿಂದಾಗಿ ಹೊಟೇಲ್ ಮುಚ್ಚುವ ಪರಿಸ್ಥಿತಿ ತಲುಪಿದ್ದಾರೆ.
ಇದು ಕರಾವಳಿ ಜನರ ಹೊಟ್ಟೆ ಪಾಡಿನ ಹಣ ಮಾಡುವ ಉದ್ಯಮ ಅಲ್ಲ, ಇಡೀ ದೇಶದಲ್ಲಿ ಹೋಟೆಲ್ ಗಳು ಸಣ್ಣ ಪುಟ್ಟ ಕಾರ್ಮಿಕರಿಗೂ, ದೊಡ್ಡ ಸಾಫ್ಟ್ವೇರ್ ಕಂಪೆನಿಗಳಿಗೂ ಹಾಗೂ ಇತರ ಎಲ್ಲ ವರ್ಗದವರಿಗೂ ಆಹಾರ ಪೂರೈಕೆ ಮಾಡುತ್ತಿವೆ. ಆದರೆ ಪಾಶ್ಚಿಮಾತ್ರಯ ರಾಷ್ಟ್ರಗಳ ಯುದ್ಧದ ನೆಪದಲ್ಲಿ ಅನಿಲ ಸರಬರಾಜಿ ಕೃತಕ ಅಭಾವ ಸೃಷ್ಟಿಸುತ್ತಿರುವುದು ಸರಿಯಲ್ಲ. ಜನಸಾಮಾನ್ಯರ ಜೊತೆಗೆ ಚೆಲ್ಲಾಟ ಆಡುತ್ತಿರುವವುದು ಅಕ್ಷಮ್ಯ. ತಕ್ಷಣ ಸಂಸದರು ಮಧ್ಯಪ್ರವೇಶ ಮಾಡಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಾಗತಿಕ ಯುದ್ಧ ನಡೆದರೂ ತೈಲ ಮತ್ತು ಅನಿಲ ಪೂರೈಕೆಗೆ ಕೊರತೆಯಿಲ್ಲ ಎನ್ನುತ್ತಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ನಾಗೇಂದ್ರ ಪುತ್ರನ್ ಅವರು, ಸರ್ಕಾರದ ಹೇಳಿಕೆ ಸತ್ಯವೋ ಅಥವಾ ಅನಿಲ ಪೂರೈಕೆದಾರರ ಹೇಳಿಕೆ ಸತ್ಯವೋ ಎನ್ನುವುದನ್ನು ಕೇಂದ್ರ ಸರ್ಕಾರದ ಭಾಗವಾಗಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಬೇಕು ಎಂದು ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.
