ಜಾಗತಿಕ ಯುದ್ಧ ಸಾಧ್ಯತೆ: ಭಾರತ ಸರ್ಕಾರದಿಂದ ವಾಯುಶಕ್ತಿ 2026 ಬೃಹತ್ ಸಮರಾಭ್ಯಾಸ!?

ವಾಸ್ತವ ಡಾಟ್ ಕಾಮ್ ವರದಿ | ಅಂತಾರಾಷ್ಟ್ರೀಯಮಟ್ಟದಲ್ಲಿ ರಷ್ಯಾ-ಉಕ್ರೇನ್ ಯುದ್ಧವು ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಇಂದಿಗೂ ಉದ್ವಿಗ್ನವಾಗಿದೆ. ಇತ್ತ ಅಮೆರಿಕವು ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯ ಎಚ್ಚರಿಕೆ ನೀಡಿರುವುದರಿಂದ ಜಾಗತಿಕ ಮಟ್ಟದಲ್ಲಿ ಆತಂಕ ಮನೆಮಾಡಿದೆ. ಇಂದಿನ (ಫೆಬ್ರವರಿ 23, 2026) ಮಾಹಿತಿಯ ಪ್ರಕಾರ, ಭಾರತದಲ್ಲಿ ಯಾವುದೇ ಯುದ್ಧದ ಅಧಿಕೃತ ಘೋಷಣೆ ಅಥವಾ ಎಚ್ಚರಿಕೆ (War Alert) ಇಲ್ಲವಾದರೂ ಇರಾನ್ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ತನ್ನ ನಾಗರಿಕರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ.

ಇರಾನ್ನಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಕಾರಣ, ಅಲ್ಲಿರುವ ಎಲ್ಲಾ ಭಾರತೀಯ ನಾಗರಿಕರು (ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ಉದ್ಯಮಿಗಳು) ಲಭ್ಯವಿರುವ ವಿಮಾನ ಅಥವಾ ಇತರ ಸಾರಿಗೆ ಮೂಲಕ ಕೂಡಲೇ ದೇಶವನ್ನು ತೊರೆಯುವಂತೆ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಪೋಖ್ರಾನ್ನಲ್ಲಿ ಫೆಬ್ರವರಿ 27 ರಂದು ಭಾರತೀಯ ವಾಯುಪಡೆಯು ‘ವಾಯು ಶಕ್ತಿ-2026’ ಎಂಬ ಬೃಹತ್ ಸಮರಾಭ್ಯಾಸವನ್ನು ನಡೆಸಲಿದ್ದು, ಇದು ಸೇನೆಯ ಸಾಮರ್ಥ್ಯ ಪ್ರದರ್ಶನದ ಭಾಗವಾಗಿದೆ. 33 ರಾಜ್ಯಗಳ 259 ಸ್ಥಳಗಳಲ್ಲಿ ವಾಯುದಾಳಿ ಸೈರನ್, ಬ್ಲ್ಯಾಕ್ಔಟ್, ಮತ್ತು ಸ್ಥಳಾಂತರಿಸುವ ತರಬೇತಿ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು, ಕಾರವಾರ, ರಾಯಚೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಈ ಭದ್ರತಾ ಸಿದ್ಧತೆಗಳ ಅಣಕು ಪ್ರದರ್ಶನ ನಡೆಯಲಿದೆ ಎಂದು ತಿಳಿದು ಬಂದಿದೆ.

ಸಂಭಾವ್ಯ ಬೆದರಿಕೆಗಳಿಗೆ ಸಿದ್ಧರಾಗಲು ನಡೆಸುವ ಸೈರನ್ ಶಬ್ದ, ಬ್ಲ್ಯಾಕ್ಔಟ್ (ದೀಪಗಳನ್ನು ಆರಿಸುವುದು) ಮತ್ತು ತುರ್ತು ಸ್ಥಳಾಂತರಿಸುವಿಕೆ ಮೊದಲಾದ “ಆಪರೇಷನ್ ಅಭ್ಯಾಸ್” (Operation Abhyas) ಆಗಿದೆ. ಇದು ನಿಜವಾದ ಯುದ್ಧದ ಎಚ್ಚರಿಕೆಯಲ್ಲ, ಬದಲಾಗಿ ತುರ್ತು ಪರಿಸ್ಥಿತಿ ತರಬೇತಿಯ ಭಾಗವೆಂದು ತಿಳಿಯಬೇಕು ಎಂದು ಸರ್ಕಾರ ತಿಳಿಸಿದೆ.
