ಭ್ರಷ್ಟಾಚಾರದ ಮಾಹಿತಿ ನೀಡಲು ‘ವೈಯಕ್ತಿಕ ಮಾಹಿತಿ’ ನೆಪ ಹೇಳುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಮಾಹಿತಿ ಹಕ್ಕು ಕಾಯ್ದೆಯಡಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿವರಗಳನ್ನು ಕೇಳಿದಾಗ, ಅಧಿಕಾರಿಗಳು ಅದನ್ನು ‘ವೈಯಕ್ತಿಕ ಮಾಹಿತಿ’ ಎಂದು ಹೇಳಿ ನಿರಾಕರಿಸುವಂತಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ರಿಟ್ ಪೆಟಿಷನ್ ಸಂಖ್ಯೆ 17718/2024, ದಿನಾಂಕ 26-06-2024 ಪ್ರಕರಣದ ಆದೇಶದ ಪ್ರಕಾರ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವಾಗ ಆರ್ಟಿಐ ಕಾಯಿದೆಯ ಕಲಂ 8(1)(ಜೆ) (ವೈಯಕ್ತಿಕ ಮಾಹಿತಿ ರಕ್ಷಣೆ) ಅಡಿಯಲ್ಲಿ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮಾಹಿತಿ ಹಕ್ಕು ಅಧಿನಿಯಮದ ಕಲಂ 24(4)ರ ಪ್ರಕಾರ, ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಮಾಹಿತಿಗಳು ಗೌಪ್ಯತೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಇದರಿಂದ ಭ್ರಷ್ಟಾಚಾರದ ತನಿಖೆ ಎದುರಿಸುತ್ತಿರುವ ಅಧಿಕಾರಿಗಳ ವಿವರಗಳನ್ನು ಪಡೆಯುವುದು ಈಗ ಸುಲಭವಾಗಲಿದೆ.

ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಡಲು ‘ಗೌಪ್ಯತೆ’ಯನ್ನು ಇನ್ನು ಮುಂದೆ ಅಸ್ತ್ರವಾಗಿ ಬಳಸಲು ಸಾಧ್ಯವಿಲ್ಲ. ಮಾಹಿತಿ ನಿರಾಕರಿಸುವ ಅಧಿಕಾರಿಗಳ ವಿರುದ್ಧ ಈ ತೀರ್ಪನ್ನು ಉಲ್ಲೇಖಿಸಿ ಮೇಲ್ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಹೆಚ್ಚಿನ ಶಕ್ತಿ ಸಿಕ್ಕಂತಾಗಿದೆ.
ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಕಿತ್ತೊಗೆಯಲು ಪಾರದರ್ಶಕತೆ ಅತ್ಯಗತ್ಯ. ಈ ಮಹತ್ವದ ತೀರ್ಪು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿದಿದೆ. ಆರ್.ಟಿ.ಐ ಅರ್ಜಿಗಳನ್ನು ಅಧಿಕಾರಿಗಳು ವಿನಾಕಾರಣ ತಿರಸ್ಕರಿಸುತ್ತಿದ್ದಾರೆಯೇ? ಈ ಮಾಹಿತಿಯನ್ನು ಅವರ ಗಮನಕ್ಕೆ ತನ್ನಿ.
