ಕಂಡ್ಲೂರು ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಗೆ ಅನುಮೋದನೆ: ಕುಂದಾಪುರ ಶಾಸಕ ಕೊಡ್ಗಿ ಹರ್ಷ
ಕುಂದಾಪುರ : ತೀರ್ಥಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52ರ ಕಿಲೋ ಮೀಟರ್.79.00ರಲ್ಲಿ ಬಳ್ಕೂರು ಕಂಡ್ಲೂರು ಮಧ್ಯ ವರಾಹಿ ನದಿಗೆ ಅಡ್ಡಲಾಗಿ ಇರುವ ಸೇತುವೆಯ ಮರು ನಿರ್ಮಾಣದ ಬಗ್ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದನ್ನು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಸಂತಸ ವ್ಯಕ್ತಪಡಿಸಿದ್ದಾರೆ.


ಕೆಲವು ದಿನಗಳ ಹಿಂದೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳೆ ಅವರನ್ನು ಭೇಟಿ ಮಾಡಿ, ತೀರ್ಥಳ್ಳಿ ಕುಂದಾಪುರ ರಸ್ತೆಯ ರಾಜ್ಯ ಹೆದ್ದಾರಿ 52 ಆಗಿದ್ದು ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಅತಿ ಹತ್ತಿರದ ರಸ್ತೆಯಾಗಿದ್ದು, ಕಿ.ಮೀ. 79.00ರಲ್ಲಿ ಬಳ್ಕೂರು ಕಂಡ್ಲೂರು ಮಧ್ಯ ವರಾಹಿ ನದಿಗೆ ಅಡ್ಡಲಾಗಿರುವ ಸೇತುವೆಯ ಮರು ನಿರ್ಮಾಣದ ಬಗ್ಗೆ ಮನವಿ ಮಾಡಿದ್ದರು.
ಅಲ್ಲದೇ 1972 ರಲ್ಲಿ ನಿರ್ಮಾಣವಾಗಿದ್ದ 10 ಅಂಕಣಗಳ ಒಟ್ಟು 312.00ಮೀ ಉದ್ದದ ಈ ಸೇತುವೆ ಶಿಥಿಲಗೊಂಡಿದ್ದು, ರಾಜ್ಯ ಹೆದ್ದಾರಿಯಲ್ಲಿ ಅಧಿಕ ಭಾರ ಹೊತ್ತು ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಕುಸಿಯುವ ಭೀತಿಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಸೇತುವೆಯ ಮರು ನಿರ್ಮಾಣಕ್ಕೆ ಅಂದಾಜು ನಾಲ್ಕು ಸಾವಿರ ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡುವಂತೆ ವಿನಂತಿಸಿದ್ದರು.
ಇದೀಗ ಶಾಸಕರ ಮನವಿಗೆ ಸಚಿವ ಸತೀಶ್ ಜಾರಕಿಹೊಳೆ ಸ್ಪಂದಿಸಿದ್ದು ಸೇತುವೆಯ ಮರು ನಿರ್ಮಾಣಕ್ಕೆ 55 ಕೋಟಿ ಕಾಮಗಾರಿಗಳಿಗೆ ಮಂಜೂರು ಮಾಡಿದ್ದಾರೆ.
