ಕೋಟೇಶ್ವರ: ಹಾಡಹಗಲೇ ಮನೆಗಳ ಮೇಲೆ ಬೀಳುತ್ತಿವೆ ನಿಗೂಢ ಕಲ್ಲುಗಳು! ಸ್ಥಳೀಯರು ಕಂಗಾಲು! ಕಿಡಿಗೇಡಿಗಳ ಪತ್ತೆಗೆ ಯುವಕರ ತಂಡದಿಂದ ಪಹರೆ!
ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರದ ಹಂಗಳೂರಿನಲ್ಲಿರುವ ಮೂರು ಬಾಡಿಗೆ ಮನೆಗಳ ಮೇಲೆ ಕಿಡಿಗೇಡಿಗಳು ಕಲ್ಲು ಎಸೆಯುತ್ತಿರುವ ಘಟನೆ ಮಂಗಳವಾರ ಸಂಜೆಯಿಂದ ನಿರಂತರ ನಡೆಯುತ್ತಿದೆ. ಆದರೆ ಕಲ್ಲು ಯಾವ ದಿಕ್ಕಿನಿಂದ ಎಸೆಯಲ್ಪಡುತ್ತಿದೆ? ಯಾರು ಎಸೆಯುತ್ತಿದ್ದಾರೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

ಮಂಗಳವಾರ ಸಂಜೆ ಸುಮಾರು ನಾಲ್ಕು ಘಂಟೆಯಿಂದ ಈ ಕೃತ್ಯ ನಡೆಯುತ್ತಿದೆ. ಜಲ್ಲಿಕಲ್ಲುಗಳು, ಗಾರೆ ಮಾಡಿದ ಸಿಮೆಂಟ್ ತುಂಡುಗಳು, ಕೆಂಪು ಕಲ್ಲುಗಳು ಬಾಡಿಗೆ ಮನೆಯ ಮೇಲ್ಛಾವಣಿಯ ಹೆಂಚುಗಳ ಮೇಲೆ, ಪಕ್ಕದಲ್ಲಿರುವ ಶೆಡ್ ಗಳ ಮೇಲ್ಛಾವಣಿ ತಗಡು ಶೀಟ್ ಗಳ ಮೇಲೆ ಬೀಳುತ್ತಿವೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಒಟ್ಟಾಗಿದ್ದು ಮಂಗಳವಾರ ರಾತ್ರಿಯಿಡೀ ಯುವಕರ ತಂಡ ಶೋಧ ಕಾರ್ಯ ನಡೆಸಿದೆ. ಪೊಲೀಸರೂ ಸ್ಥಳಕ್ಕಾಗಮಿಸಿದ್ದರು. ಆದರೆ ಪೊಲೀಸರ ಎದುರೇ ಕಲ್ಲುಗಳು ಮನೆಯ ಮೇಲೆ ಬಿದ್ದರೂ ಕಿಡಿಗೇಡಿಗಳ ಪತ್ತೆ ಸಾಧ್ಯವಾಗಿಲ್ಲ. ರಾತ್ರಿಯೂ ಕಲ್ಲುಗಳು ಬೀಳುತ್ತಿದ್ದವು.
ಬುಧವಾರ ಬೆಳಿಗ್ಗೆ ಸುಮಾರು ಒಂಭತ್ತೂವರೆಗೆ ಮತ್ತೆ ಮನೆಯ ಮೇಲೆ ಕಲ್ಲುಗಳು ಬಿದ್ದಿವೆ. ಬುಧವಾರ ಸಂಜೆ ಸುಮಾರು ಐದು ಗಂಟೆಗೆ ಮತ್ತೆ ಕಲ್ಲು ತೂರಾಟ ನಡೆದಿದೆ. ರಾತ್ರಿ ಮತ್ತೆ ಕಲ್ಲುಗಳು ಬಿದ್ದಿವೆ. ಆದರೆ ಘಟನೆಗೆ ನೈಜ ಕಾರಣ ಇನ್ನೂ ನಿಗೂಢವಾಗಿದೆ. ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಘಟನೆಯಲ್ಲಿ ಮನೆಯೊಂದರ ಬಾಗಿಲ ಮೇಲೆ ಅಳವಡಿಸಲಾಗಿದ್ದ ಗಾಜು ಒಡೆದು ಮಗುವಿನ ತಲೆಗೆ ರಕ್ತಗಾಯವಾಗಿದೆ. ಯುವಕರ ತಂಡ ಬುಧವಾರವೂ ಪಹರೆ ಕಾಯುತ್ತಿದೆ.
