ಬೈಂದೂರು: ಡಿಸೆಂಬರ್ 27ರಂದು ಬಸ್ ನಿಲ್ದಾಣ ಉದ್ಘಾಟನೆ – ಬಸ್ ಡಿಪೋ, ಉಡುಪಿ ವಿಭಾಗಕ್ಕೆ ಸಚಿವರಲ್ಲಿ ಮನವಿ – ಕೆ.ಎಸ್.ಆರ್.ಟಿ.ಸಿ ಮಾಜೀ ಅಧ್ಯಕ್ಷ ಭರವಸೆ
ಬೈಂದೂರು: ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆ ಭಾಗ್ಯ ಕಾಣದ ಬೈಂದೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಡಿಸೆಂಬರ್ 27ರಂದು ಲೋಕಾರ್ಪಣೆ ಭಾಗ್ಯ ದೊರಕಿದೆ.
ರಾಜ್ಯ ಸಾರಿಗೆ ಮತ್ತು ಮುಜರಾಯೀ ಸಚಿವ ರಾಮಲಿಂಗಾ ರೆಡ್ಡಿ ನಾಳೆ ಅಧಿಕೃತ ಉದ್ಘಾಟನೆ ಮಾಡಲಿದ್ದು, ಪೂರ್ವಭಾವಿಯಾಗಿ ಇಂದು ಮಾಜೀ ಶಾಸಕ ಮತ್ತು ಕೆಎಸ್ಆರ್ಟಿಸಿ ನಿಗಮದ ಮಾಜೀ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು, ಕಾಂಗ್ರಸ್ ಅಧಿಕಾರದಲ್ಲಿದ್ದಾಗ ಕೆಎಸ್ಆರ್ಟಿಸಿ ನಿಗಮ ಅಧ್ಕಕ್ಷನಾಗಿ 2018 ರಲ್ಲಿ ವಿಶೇಷ ಪ್ರಯತ್ನದ ಮೂಲಕ ಬೈಂದೂರಿನಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ 6 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಅನುಮೋದನೆ ದೊರಕಿತ್ತು. ಆದರೆ ಕಾಮಗಾರಿ ವಿಳಂಬದಿಂದಾಗಿ ಬಸ್ ನಿಲ್ದಾಣ ಲೋಕಾರ್ಪಣೆ ವಿಳಂಬವಾಗಿತ್ತು. ಇದೀಗ ಉದ್ಘಾಟನಾ ಭಾಗ್ಯ ಕಾಣುತ್ತಿರುವ ಬೈಂದೂರು ಬಸ್ ನಿಲ್ದಾಣವನ್ನು ಮೂಕಾಂಬಿಕಾ ಬಸ್ ನಿಲ್ದಾಣವಾಗಿ ನಾಮಕರಣ ಮಾಡಲಾಗುವುದು. ಜೊತೆಗೆ ಬಸ್ ಡಿಪೋ ಮಾಡುವಂತೆ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.

ಇದರ ಜೊತೆಗೆ ದಕ್ಷಿಣ ಕನ್ನಡದಿಂದ ಉಡುಪಿ ಜಿಲ್ಲೆ ಬೇರೆಯಾಗಿದ್ದರೂ ಉಡುಪಿಗೆ ಜಿಲ್ಲಾ ಘಟಕ ಸ್ಥಾಪನೆಯಾಗಿಲ್ಲ. ಇದರಿಂದಾಗಿ ಉಡುಪಿ ಜಿಲ್ಲೆಗೂ ಮಂಗಳೂರು ಜಿಲ್ಲೆಗೂ ಬಸ್ ಸೌಲಭ್ಯದಲ್ಲಿ ತೊಂದರೆಯಾಗುತ್ತಿದೆ. ಈ ವಿಚಾರವಾಗಿಯೂ ಸಚಿವರೊಂದಿಗೆ ಮಾತನಾಡಿ ಉಡುಪಿ ಜಿಲ್ಲಾ ಘಟಕ ಸ್ಥಾಪನೆಗೆ ಮನವೊಲಿಸುವ ಪ್ರಯತ್ನ ಮಾಡುತ್ರೇನೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಕೆ.ಎಸ್.ಆರ್ಟಿ.ಸಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ನಿರ್ದೇಶಕ ರಾಜೇಶ್ ಶೆಟ್ಟಿ, ಸಾರಿಗೆ ವಿಭಾಗದ ಕಮಲ್ ಕುಮಾರ್, ತಾಂತ್ರಿಕ ವಿಭಾಗದ ವಿನಯ್, ಸುಬ್ರಹ್ಮಣ್ಯ ಬಿಜೂರು, ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ನಾಗರಾಜ ಗಾಣಿಗ, ಸದಾಶಿವ ಡಿ.ಪಡುವರಿ ಮೊದಲಾದವರು ಹಾಜರಿದ್ದರು.
