ಧಾರ್ಮಿಕ ಶಿಕ್ಷಣ ಪ್ರತಿಬಂಧಿಸುವುದು ಸಂವಿಧಾನದ ಉಲ್ಲಂಘನೆ – ವಕೀಲ ಮಹಮ್ಮದ್ ಸುಹಾನ್ ಆತಂಕ

ಉಡುಪಿ: ಪಠ್ಯ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಮಠಮಂದಿರಗಳಲ್ಲಿ ಧಾರ್ಮಿಕ ಪಠಣಾಭ್ಯಾಸ ಮಾಡುವುದು ಸಂವಿಧಾನ ಬದ್ಧವಾಗಿರುವಾಗ ಮದ್ರಸಾಗಳಲ್ಲಿ ದಿನಕ್ಕೊಂದು ಗಂಟೆ ಧಾರ್ಮಿಕ ಪಠಣಾಭ್ಯಾಸ ಮಾಡುವುದರಲ್ಲಿ ತಪ್ಪೇನಿದೆ? ಎಂದು ಉಡುಪಿಯ ವಕೀಲ ಮಹಮ್ಮದ್ ಸುಹಾನ್ ಪ್ರಶ್ನಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಇತ್ತೀಚೆಗೆ ಮದರಸ ಶಿಕ್ಷಣದ ಮೇಲೆ ಉದ್ದೇಶಿಯ ನಿರ್ಭಂದ ಹೇರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಸಂವಿಧಾನಕ್ಕೆ ಗೌರವ ಕೊಡದ ಮತ್ತು ಅದನ್ನು ಒಪ್ಪದ ಗುಂಪೊಂದು ಇಂತಹ ಹೀನ ಕೃತ್ಯಕ್ಕೆ ಕೈಹಾಕಿರುವುದು ಎಲ್ಲೆಡೆ ಕಂಡು ಬರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅವರವರ ಧಾರ್ಮಿಕ ಶಿಕ್ಷಣ ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹೀಗಿರುವಾಗ ಒಂದೇ ಧರ್ಮವನ್ನು ಗುರಿಯಾಗಿಸಿ ಇಂದು ಪ್ರತೀ ಹೆಜ್ಜೆಯಲ್ಲೂ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಆಗುತ್ತಿದೆ. ಲೌಕಿಕ ಶಿಕ್ಷಣದ ಜೊತೆ ಜೊತೆಗೇ ಧಾರ್ಮಿಕ ಶಿಕ್ಷಣವು ಅವಶ್ಯಕ. ಮಠಮಂದಿರಗಳಲ್ಲಿ ಯಾವರೀತಿ ಧಾರ್ಮಿಕ ಶಿಕ್ಷಣ ಗೌರವಯುತವಾಗಿ ಪಡೆಯುತ್ತಾರೆಯೋ ಅದೇ ರೀತಿ ಮದರಸಗಳಲ್ಲಿಯೂ ಧಾರ್ಮಿಕ ಶಿಕ್ಷಣ ಅಷ್ಟೇ ಗೌರವಯುತವಾಗಿ ಪಡೆಯುವುದು ಮುಸ್ಲಿಂ ಮಕ್ಕಳ ಹಕ್ಕು. ಇದರ ಮೇಲಿನ ಉದ್ದೇಶಿತ ದಾಳಿ ಪ್ರಜಾಪ್ರಭುತ್ವದ ಕಗ್ಗೊಲೆ. ಪೂರ್ವಾನುಮತಿ ಪಡೆಯಬೇಕು ಎಂದು ವಾದಿಸುವವರು ಎರಡೂ ಕಡೆಗೂ ಅದು ಅನ್ವಯ ಎನ್ನುವುದನ್ನು ಮರೆಯಬಾರದು ಎಂದು ವಕೀಲ ಮಹಮ್ಮದ್ ಸುಹಾನ್ ಹೇಳಿದ್ದಾರೆ.
