ಇಂಜಿನಿಯರ್ ಕಣ್ಗಾವಲಿನಲ್ಲೂ ನಿಲ್ಲದ ಅಕ್ರಮ ಮರಳು ಸಾಗಾಟ: ಮೂರು ಟಿಪ್ಪರ್ ವಶಕ್ಕೆ!
ಕುಂದಾಪುರ: ಯಾವ ಕಾನೂನಿಗೂ ಮರಳು ಮಾಫಿಯಾ ಜಗ್ಗುವಂತೆ ಕಾಣುತ್ತಿಲ್ಲ.! ಸರ್ಕಾರವೂ ಕರಾವಳಿಯ ಮರಳು ಮಾಫಿಯಾಗೆ ಪರೋಕ್ಷ ಬೆಂಬಲ ನೀಡುವ ನೆಪದಲ್ಲಿ ಕಾಮಗಾರಿಯೇ ನಡೆಯದ ಕೆಆರ್ಐಡಿಯಲ್ ಅಡಿಯಲ್ಲಿ ಮರಳು ದಂಧೆಗೆ ಅವಕಾಶ ಕಲ್ಪಿಸಿದೆ. ಪರಿಣಾಮವಾಗಿ ಮಾಮೂಲಿಯೊಂದಿಗೆ ಮರಳು ಮಾಫಿಯಾ ನಿರಂತರ ನಡೆಯುತ್ತಿದೆ.



ಬುಧವಾರ ಕುಂದಾಪುರ (ಕಂಡ್ಲೂರು) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಟಿಪ್ಪರ್ ಗಳನ್ನು ಪೊಲೀಸರು ಮರಳು ಸಹಿತ ವಶಪಡಿಸಿಕೊಂಡಿದ್ದಾರೆ. ಬಳಿಕ ಕಂಡ್ಲೂರು ಪೊಲೀಸರು ಉಡುಪಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

ಹಲವು ವರದಿಗಳು, ಪ್ರತಿಭಟನೆಗಳ ಎಚ್ಚರಿಕೆಯ ಬಳಿಕ ಎಚ್ಚೆತ್ತುಕೊಂಡ ಇಲಾಖೆ ಹಳ್ನಾಡು, ಕಂಡ್ಲೂರು, ಮೊಳಹಳ್ಳಿಯಲ್ಲಿ ಇರುವ ಮರಳು ಧಕ್ಕೆಗಳಲ್ಲಿ ಪೊಲೀಸ್ ಕಾವಲು ಹಾಕಿತ್ತು. ಜೊತೆಗೆ ಇಂಜಿನಿಯರ್ ಗಳನ್ನೂ ಕಣ್ಗಾವಲಿಗೆ ನೇಮಿಸಿತ್ತು. ಸಿಸಿಟಿವಿ ಕೆಮೆರಾಗಳೂ ಇವೆ. ಆದರೆ ಸ್ಥಳದಲ್ಲಿಯೇ ಇದ್ದ ಇಂಜಿನಿಯರ್ ಗಳ ಕಣ್ಣು ತಪ್ಪಿಸಿ ಅದು ಹೇಗೆ ಅಕ್ರಮ ಮರಳು ಸಾಗಾಟ ನಡೆಸಲಾಗುತ್ತಿದೆ? ಅಥವಾ ಇಂಜಿನಿಯರ್ ಗಳ ಬೆಂಬಲದೊಂದಿಗೇ ಅಕ್ರಮ ದಂಧೆ ನಡೆಯುತ್ತಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಪೊಲೀಸರೂ ಮರಳು ಸಾಗಾಟದ ವಾಹನಗಳಿಗಷ್ಟೇ ಕೇಸು ಜಡಿದು, ವಶಕ್ಕೆ ಪಡೆದು ಕೈತೊಳೆದುಕೊಳ್ಳುತ್ತಾರೆ. ಇನ್ನಾದರೂ ಸಂಬಂಧಪಟ್ಟವರು ಅನುಮಾನಗಳನ್ನು ಬಗೆಹರಿಸುವರೇ ಕಾದು ನೋಡಬೇಕಿದೆ.
