ಸಾಲಿಗ್ರಾಮ: ಅಕ್ರಮ ಘನತ್ಯಾಜ್ಯ ಘಟಕದ ಆರೋಪಿಗಳೊಂದಿಗೆ ಲೋಕಾಯುಕ್ತ ತನಿಖಾಧಿಕಾರಿಗಳ ಮೋಜುಮಸ್ತಿ! – ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ ನಾಗೇಂದ್ರ ಪುತ್ರನ್
ಸಾಲಿಗ್ರಾಮ: ಇಲ್ಲಿನ ಪಟ್ಟಣ ಪಂಚಾಯತ್ ನಲ್ಲಿ ನಡೆದ ಅನಧಿಕೃತ ಘನತ್ಯಾಜ್ಯ ಘಟಕ ಸ್ಥಾಪನೆ ಅವ್ಯವಹಾರಕ್ಕೆ ಸಂಬಂಧಿಸಿ ತನಿಖೆ ನಡೆಸಲು ಬಂದ ಅಧಿಕಾರಿಗಳು ಆರೋಪಿಗಳೊಂದಿಗೆ ಮೋಜು ಮಸ್ತಿ ಮಾಡಿರುವುದು ಅಕ್ಷಮ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಕಿಡಿಕಾರಿದ್ದಾರೆ.

ಅಲ್ಲದೇ ತನಿಖೆ ನಡೆಯುತ್ತಿರುವಾಗಲೇ ಅನಧಿಕೃತ ಘನತ್ಯಾಜ್ಯ ಘಟಕ ಎಂದು ಗೊತ್ತಿದ್ದರೂ ಅಲ್ಲಿ ವಿದ್ಯುತ್ ಕಂಬ ಹೊಳೆಯ ದಂಡೆಯ ಮೇಲೆ ಸ್ಥಳೀಯರ ವಿರೋಧವಿದ್ದರೂ ವಿದ್ಯುತ್ ಕಂಬ ವನ್ನು ಹಾಕಿಸುವ ಮೂಲಕ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧಿಕಾರಿಗಳು ಅಕ್ರಮದ ಮೇಲೆ ಅಕ್ರಮ ಎಸಗಿದ್ದಾರೆ.
ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸಲು ಅಧಿಕಾರಿಗಳನ್ನು ನಿಯೋಜಿಸಿದ್ದರು. ಆದರೆ, ತನಿಖೆಗೆ ಬಂದಿರುವ ಅಧಿಕಾರಿಗಳೇ ಆ ಅವ್ಯವಹಾರಕ್ಕೆ ಆರೋಪಿತ ವ್ಯಕ್ತಿಯೊಂದಿಗೆ ಅತಿಯಾದ ಆತ್ಮೀಯತೆಯಿಂದ ವರ್ತಿಸುತ್ತಿರುವುದು ಕಂಡುಬಂದಿದೆ ಎಂದ ಅವರು, ಶುಕ್ರವಾರ ತನಿಖಾಧಿಕಾರಿಗಳು ಆರೋಪಿತ ವ್ಯಕ್ತಿಯೊಂದಿಗೆ “ಸಾಸ್ತಾನ ಪ್ಯಾರಡೈಸ್” ಹೋಟೆಲ್ನಲ್ಲಿ ಭರ್ಜರಿ ಭೋಜನದಲ್ಲಿ ಭಾಗವಹಿಸಿದ್ದರೆ, ಶನಿವಾರ ಮಧ್ಯಾಹ್ನ “ತವಾ ಪಂಜಾಬ್ ಕೋಟ” ಹೋಟೆಲ್ನಲ್ಲಿ ಮತ್ತೆ ಒಟ್ಟಿಗೆ ಊಟ ಮಾಡಿರುವುದು ಹಾಗೂ ನಂತರ “ಕಾಯಕ್ಕಿನ್ನ ಪಾಯಿಂಟ್”ನಲ್ಲಿ ಮೋಜು–ಮಸ್ತಿಯಲ್ಲಿ ತೊಡಗಿಕೊಂಡಿರುವುದು ಖಂಡನೀಯ ಎಂದಿದ್ದಾರೆ.
ಈ ರೀತಿಯ ನಡೆ, ನ್ಯಾಯ ಕೊಡಿಸಬೇಕಾದ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕಾದ ಅಧಿಕಾರಿಗಳಿಂದ ನಿರೀಕ್ಷಿಸಲಾದ ನಡವಳಿಕೆಗೆ ವಿರುದ್ಧವಾಗಿದೆ. ಆರೋಪಿತ ವ್ಯಕ್ತಿಯೊಂದಿಗೆ ಈ ರೀತಿಯ ಮೋಜುಮಸ್ತಿ ನಡೆಸುವ ತನಿಖಾಧಿಕಾರಿಗಳಿಂದ ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸಿದೆ. ಇಂತಹ ತನಿಖಾಧಿಕಾರಿಗಳಿಂದ ಸಾರ್ವಜನಿಕರಿಗೆ, ಹೋರಾಟಗಾರರಿಗೆ, ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇಲ್ಲ. ಹಾಗಾಗಿ ತನಿಖಾಧಿಕಾರಿಯನ್ನು ಅಮಾನತ್ತುಗೊಳಿಸಿ ಮರುತನಿಖೆಗೆ ಆದೇಸಿಸಬೇಕು ಎಂದು ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.



