ದೇಶದ್ರೋಹಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷನ ವಿರುದ್ಧ ಎನ್.ಐ.ಎ. ತನಿಖೆಯಾಗಲಿ – ಕೋಟ ನಾಗೇಂದ್ರ ಪುತ್ರನ್ ಆಗ್ರಹ
ಸಾಲಿಗ್ರಾಮ: ವಿದೇಶಿ ನುಸುಳುಕೋರರಿಗೆ ಆಶ್ರಯ ನೀಡಿದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಬಿಲ್ಲಾಡಿ ಪೃಥ್ವಿರಾಜ್ ಶೆಟ್ಟಿ ವಿರುದ್ಧ ಕೇಳಿ ಬಂದ ದೇಶದ್ರೋಹ ಪ್ರಕರಣವನ್ನು ಎನ್.ಐ.ಎ.ಗೆ ವಹಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ನಲ್ಲಿದ್ದಾಗ ಅನೈತಿಕ ದಂಧೆ ನಡೆಸಲು ಅವಕಾಶ ಸಿಗದ ಕಾರಣ ಬಿಜೆಪಿ ಪಕ್ಷವನ್ನು ಸೇರಿ, ಸಿಕ್ಕಸಿಕ್ಕಿದ್ದಕ್ಕೆಲ್ಲ ಪ್ರತಿಭಟನೆ ಮಾಡಿ, ಉಡುಪಿ ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ಸ್ಥಾನವನ್ನು ಪಡೆದು, ಈಗ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಅವರ ರೆಸಾರ್ಟ್ನಲ್ಲಿ ಯಾವುದೇ ದಾಖಲೆಗಳಲ್ಲಿದೆ ವಿದೇಶಿಗರು ಅದೇನು ಮಾಡುತ್ತಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದಿದ್ದಾರೆ.
ಚಿಕ್ಕ ವಯಸ್ಸಿನ ಸುಮಾರು ಏಳು ಮಂದಿ ಅನಧಿಕೃತವಾಗಿ ರೆಸಾರ್ಟ್ನಲ್ಲಿ ವಾಸಿಸುತ್ತಿರುವುದು ನಿಜವಾಗಿಯೂ ಅಚ್ಚರಿ ಮತ್ತು ಆತಂಕವನ್ನುಂಟು ಮಾಡಿದೆ. ಇಂದಿನ ದಿನಗಳಲ್ಲಿ ಸಾಮಾನ್ಯ ಲಾಡ್ಜ್ಗಳಲ್ಲೂ ಉಳಿದುಕೊಳ್ಳಬೇಕಾದರೆ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಕನಿಷ್ಠ ಆಧಾರ್ ಕಾರ್ಡ್ ನೀಡದಿದ್ದರೂ ಅಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ. ಆದರೆ ವಿದೇಶಿ ನಾಗರಿಕರನ್ನು ಸಂಕಮ್ಮ ತಾಯಿ ರೆಸಾರ್ಟ್ನಲ್ಲಿ ಯಾವ ಕೆಲಸಕ್ಕೆ ಇರಿಸಿಕೊಂಡಿದ್ದಾರೆ ಎನ್ನುವುದರ ಬಗ್ಗೆಯೂ ತನಿಖೆಯಾಗಬೇಕು. ದೇಶಭಕ್ತಿ, ಸಂಸ್ಕಾರ, ಸಂಸ್ಕೃತಿ ಇವುಗಳನ್ನೆಲ್ಲ ಗುತ್ತಿಗೆ ಪಡೆದವರಂತೆ ವರ್ತಿಸುವ ಬಿಜೆಪಿ ಪ್ರಮುಖರು ಇಂಥ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಪಾಲ್ಗೊಂಡವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ? ಬಿಜೆಪಿ ನಾಯಕರಿಗೆ ದೇಶಭಕ್ತಿ ಇದ್ದರೆ ತಕ್ಷಣ ಪೃಥ್ವಿರಾಜ್ ಶೆಟ್ಟಿಯನ್ನು ಪಕ್ಷದಿಂದಲೇ ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ದಾರೆ.
