ಶಂಕರನಾರಾಯಣದಲ್ಲಿ ಸೀನಿಯರ್ ಚೇಂಬರ್ ಯೂತ್ ವಿಂಗ್ ಉದ್ಘಾಟನೆ
ಶಂಕರನಾರಾಯಣ: ಸೀನಿಯರ್ ಚೇಂಬರ್ ನಂತಹಾ ಸಂಘಟನೆಗಳ ಯುವ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಉತ್ತಮ ನಾಯಕರಾಗಿ ಬೆಳೆದು ಜೀವನದಲ್ಲಿ ಉನ್ನತ ಯಶಸ್ಸನ್ನು ಸಾಧಿಸಬಹುದು ಎಂದು ಸೀನಿಯರ್ ಚೇಂಬರ್ ನ ತರಬೇತಿ ಮತ್ತು ಯುವ ವ್ಯವಹಾರಗಳ ರಾಷ್ಟ್ರೀಯ ನಿರ್ದೇಶಕ ಶ್ರೀ ಹುಸೇನ್ ಹೈಕಾಡಿ ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಸೀನಿಯರ್ ಚೇಂಬರ್ ಸಹಭಾಗಿತ್ವದಲ್ಲಿ ಶಂಕರನಾರಾಯಣದಲ್ಲಿ ಶಂಕರನಾರಾಯಣ ಲೀಜನ್ ಘಟಕದ ಯೂತ್ ವಿಂಗ್ ಉದ್ಘಾಟನೆ ಮತ್ತು ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸೀನಿಯರ್ ಚೇಂಬರ್ ಶಂಕರನಾರಾಯಣ ಲೀಜನ್ ನ ಅಧ್ಯಕ್ಷ ಶ್ರೀ ರಾಮಚಂದ್ರ ದೇವಾಡಿಗ ಪ್ರಾಸ್ತಾವಿಸಿ ಸೀನಿಯರ್ ಚೇಂಬರ್ ನ ಇತಿಹಾಸ ಮತ್ತು ಕಾರ್ಯವೈಖರಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್, ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಕಾಲೇಜಿನ ಮತ್ತು ಸಮಾಜದ ಉನ್ನತಿಗಾಗಿ ಕೆಲಸಗಳನ್ನು ಮಾಡಬೇಕು ಎಂದರು. ಯೂತ್ ವಿಂಗ್ ಅಧ್ಯಕ್ಷ ನಿಖಿತ್ ಕುಮಾರ್ ತಮಗೆ ದೊರೆತ ಈ ಅವಕಾಶಕ್ಕೆ ಸಂತಸ ವ್ಯಕ್ತಪಡಿಸಿದರು. ಯೂತ್ ವಿಂಗ್ ಅಧ್ಯಕ್ಷ ನಿಖಿತ್ ಕುಮಾರ್, ಕಾರ್ಯದರ್ಶಿ ನಿಧಿ ಶೆಟ್ಟಿ, ಖಜಾಂಜಿ ಸಹನಾ ಹಾಗೂ ಪದಾಧಿಕಾರಿಗಳಿಗೆ ಹುಸೇನ್ ಹೈಕಾಡಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಸೀನಿಯರ್ ಚೇಂಬರ್ ನ ವಲಯ 15ರ ತರಬೇತುದಾರ ಶ್ರೀ ಕೆಕೆ ಶಿವರಾಮ ಅವರು ನಾಯಕತ್ವ ಅಭಿವೃದ್ಧಿಯ ಕುರಿತು ತರಬೇತಿ ಕಾರ್ಯಗಾರ ನಡೆಸಿದರು.
ಯೂತ್ ವಿಂಗ್ ಸಂಚಾಲಕಿ ಪ್ರಜ್ಞಾ ಸ್ವಾಗತಿಸಿ,ಎಂ.ಕಾಂ. ವಿದ್ಯಾರ್ಥಿನಿಯರಾದ ಶ್ವೇತಾ ಮತ್ತು ಪಲ್ಲವಿ ಪರಿಚಯಿಸಿದರು. ಸಹನಾ ನಿರೂಪಿಸಿ, ಕು. ಸುಷ್ಮಾ ವಂದಿಸಿದರು.
