ಹೆಮ್ಮಾಡಿ: ಅಗಲಿದ ವಿದ್ಯಾರ್ಥಿಗೆ ಶ್ರದ್ದಾಂಜಲಿ ; ತಪ್ಪಿಲ್ಲದಿರುವುದು ಅರಿವಾಗಿದೆ – ಲವೇಶ್ ಪೂಜಾರಿ
ಕುಂದಾಪುರ :ಇತ್ತೀಚಿಗೆ ನಿಧನ ಹೊಂದಿದ ಹೆಮ್ಮಾಡಿ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ನಮೇಶನ ಸಂತಾಪ ಸಭೆಯನ್ನು ಕಾಲೇಜಿನ ವತಿಯಿಂದ ಆಯೋಜನೆ ಮಾಡಲಾಯಿತು. ಸಭೆಯಲ್ಲಿ ಮೃತ ವಿದ್ಯಾರ್ಥಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಮಾಡಲಾಯಿತು.

ಮೃತ ವಿದ್ಯಾರ್ಥಿ ತಂದೆ ಲವೇಶ್ ಪೂಜಾರಿ ಮಾತನಾಡಿ, ಕಾಲೇಜಿನ ವತಿಯಿಂದ ಸಂತಾಪ ಸಭೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಮಗನನ್ನು ಕಳೆದುಕೊಂಡ ದುಃಖದಲ್ಲಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಲೇಜಿನ ಬಗ್ಗೆ ತಪ್ಪು ಹೇಳಿಕೆ ನೀಡಿದ್ದೇನೆ. ವಿಷಯವನ್ನು ಮನವರಿಕೆ ಮಾಡಿಕೊಂಡ ಮೇಲೆ ಕಾಲೇಜಿನಿಂದ ತಪ್ಪಿಲ್ಲದಿರುವುದು ಅರಿವಾಗಿದೆ. ನನ್ನ ದೊಡ್ಡ ಮಗ ಇದೇ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ಪಡೆದಿದ್ದಾನೆ. ಸಭೆಯಲ್ಲಿ ಉಪಸ್ಥಿತರಿರುವ ಎಲ್ಲ ಉಪನ್ಯಾಸಕರಿಗೂ, ಶಿಕ್ಷಕರಿಗೂ, ಸಿಬ್ಬಂದಿವರ್ಗದವರಿಗೂ,ಊರಿನವರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.
ಸಂತಾಪ ಸಭೆಯಲ್ಲಿ ಹೆಮ್ಮಾಡಿ ಮೀನುಗಾರರ ಸೇವಾ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ್ ಹಟ್ಟಿಯಂಗಡಿ, ಪ್ರಗತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕುಲಾಲ್, ಉದ್ಯಮಿ ಶ್ರೀಕಾಂತ್ ಹೆಮ್ಮಾಡಿ, ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ, ಉಪಪ್ರಾಂಶುಪಾಲ ರಮೇಶ್ ಪೂಜಾರಿ, ಮುಖ್ಯ ಶಿಕ್ಷಕಿ ದೀಪಿಕಾ ಆಚಾರಿ, ಸ್ಥಳೀಯರಾದ ಹಸನ್ ಸಾಹೇಬ್, ಪ್ರವೀಣ್ ದೇವಾಡಿಗ ಜನತಾ ಪಿಯು ಹಾಗೂ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಉಪನ್ಯಾಸಕರು ಶಿಕ್ಷಕರು, ನಮೇಶ ನ ಕುಟುಂಬಸ್ಥರು ಊರಿನವರು ಉಪಸ್ಥಿತರಿದ್ದರು. ಉಪನ್ಯಾಸಕ ಉದಯ ನಾಯ್ಕ ನಿರೂಪಿಸಿದರು.