ಕುಂದಾಪುರ: ಕಲೆಯನ್ನು ಆಸ್ವಾದಿಸುವ ಶಿಕ್ಷಣ ಇಂದಿನ ಅಗತ್ಯ – ಬಿ.ಆರ್.ವೆಂಕಟರಮಣ ಐತಾಳ್
ಕುಂದಾಪುರ: ಕುಂದಾಪುರ ಸಮುದಾಯದ ವತಿಯಿಂದ ಭಾನುವಾರ ಕುಮದಾಪುರದ ಅಂಬೇಡ್ಕರ್ ಸಭಾಭವನದಲ್ಲಿ ಕನ್ನಡ ರಂಗಭೂಮಿ ಸವಾಲು ಸಾಧ್ಯತೆಗಳು ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದಲ್ಲಿ ಕಾರ್ಕಳದ ಯಕ್ಷ ರಂಗಾಯಣದ ನಿರ್ದೇಶಕ, ಬಿ.ಆರ್.ವೆಂಕಟರಮಣ ಐತಾಳ್ ಅವರು ವಿಚಾರ ಮಂಡನೆ ಮಾಡಿದರು.

ಸ್ವಾತಂತ್ರ್ಯಪೂರ್ವದ ವಸಾಹತು ಕಾಲದಿಂದಲೂ ರಾಷ್ಟ್ರೀಯ ರಂಗಭೂಮಿ ಮಾತ್ರವಲ್ಲದೆ ಕನ್ನಡ ರಂಗಭೂಮಿಯು ತನ್ನದೇ ಆದ ಹೊಸ ಹೊಸ ನೆಲೆಗಳನ್ನು ಕಂಡುಕೊಳ್ಳುತ್ತಲೇ ಬಂದಿದೆ. ಕನ್ನಡ ರಂಗಭೂಮಿ ಹಲವಾರು ಹೊರಳು ದಾರಿಗಳನ್ನು ದಾಟಿ ಬಂದಿದೆ. ಹೆಸರಿಸುವುದಾದಲ್ಲಿ ಅದು ಶ್ರೀರಂಗರ ದಾರಿ, ಬಿ ವಿ ಕಾರಂತರ ಜಾತ್ರೆ, ಉತ್ಸವ, ಸಂಭ್ರಮದ ದಾರಿ.ರಂಗಭೂಮಿಯನ್ನು ಜನಸಾಮಾನ್ಯರಿಗೂ ತಲುಪುವಂತೆ ಮಾಡಿದ ಕಾರಂತರ ವಿನೂತನ ರಂಗಸಂಪ್ರದಾಯ ತನ್ನದೇ ಆದ ಮಿತಿಯನ್ನು ಹೊಂದಿತ್ತು. ಮುಂದೆ 80ರ ದಶಕದಲ್ಲಿ ಸಮುದಾಯದಂತಹ ಪ್ರಗತಿಪರ ಸಂಘಟನೆಗಳ ಸಾಮಾಜಿಕ ಚಳುವಳಿಯ, ಸಾಮಾಜಿಕ ಎಚ್ಚರದ ಕಾಲವಾಗಿ ತಕ್ಷಣದ ಸಾಮಾಜಿಕ ಸಮಸ್ಯೆಗಳಿಗೆ ಬೀದಿ ನಾಟಕಗಳ ವಿಶಿಷ್ಟ ವಿನ್ಯಾಸದ ಮೂಲಕ ಸಾರ್ವಜನಿಕರ ಗಮನಸೆಳೆಯುವ ಪ್ರಯೋಗಗಳು ನಡೆದವು. ಬ್ರೆಕ್ಟ್ ಮುಂತಾದ ಮಹಾನ್ ನಾಟಕಕಾರರ ನಾಟಕಗಳು ರಂಗ ಪ್ರಯೋಗಗಳಿಗೆ ಒಳಪಟ್ಟವು. ಹಾಗೆ ಮುಂದುವರಿದು ರಂಗಭೂಮಿಯನ್ನು ಗಂಭೀರವಾಗಿ ಮಾಧ್ಯಮವಾಗಿ ಶಾಸ್ತ್ರೀಯ ಅಧ್ಯಯನ ಮಾಡುವ ರಂಗಭೂಮಿ ಶಿಕ್ಷಣ ಮುನ್ನೆಲೆಗೆ ಬಂತು. ರಂಗಭೂಮಿಯನ್ನು ಅಧ್ಯಯನ ಮಾಡುವ ರಂಗಶಾಲೆಗಳು, ಶಿಬಿರಗಳು ತರಬೇತಿಗಳು ಈ ಸಂದರ್ಭದಲ್ಲಿ ನಡೆದವು.

20ನೇ ಶತಮಾದ ಆಧುನಿಕ ಸಂದರ್ಭದಲ್ಲಿ ಜಾಗತೀಕರಣ, ಖಾಸಗಿಕರಣ ಅಲ್ಲದೆ ಸಾಮಾಜಿಕ ಜಾಲತಾಣಗಳ ಪರಿಣಾಮವಾಗಿ ಕನ್ನಡ ರಂಗಭೂಮಿ ತನ್ನ ಅಸ್ತಿತ್ವಕ್ಕೆ ಹೊಸ ಹೊಸ ನೆಲೆಗಳನ್ನು ಕಂಡುಕೊಳ್ಳಬೇಕಾಗಿದೆ. ರಂಗಭೂಮಿ ಸಾಮಾಜಿಕ ಸಮಸ್ಯೆಗಳ ಅಭಿವ್ಯಕ್ತಿಯ ದಾರಿ. ಪ್ರಸ್ತುತ ಪರಿಸ್ಥಿತಿಯಲ್ಲಿ ರಂಗಭೂಮಿ ಸಾಮಾಜಿಕ ಎಚ್ಚರದ ಕಾಲವಾಗಿದೆ. ಇದು ರಂಗಭೂಮಿಗೆ ಸಂದಿಗ್ಧ ಸಮಯ. ಸುಳ್ಳಿನ ನಡುವೆ ಸುಳ್ಳನ್ನೆ ಹೇಳುವ ಸುಳ್ಳನ್ನೇ ಪ್ರತಿನಿಧಿಸುವ ಪ್ರಸ್ತುತ ಸನ್ನಿವೇಶ ಮತ್ತು ಮಾಧ್ಯಮಗಳ ನಡುವೆ ನಾವು ಎತ್ತಸಾಗಬೇಕು ಯಾವ ಸೈದ್ಧಾಂತಿಕ ಹಿನ್ನೆಲೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಗಮನಿಸಬೇಕು ಎಂದು ಯೋಚಿಸಲೂ ಆಗದ ವೇಗದಲ್ಲಿ ಸಾಮಾಜಿಕ ಸ್ಥಿತ್ಯಂತರಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಅದೇ ವೇಗದಲ್ಲಿ ರಂಗಭೂಮಿಯ ಚಟುವಟಿಕೆಗಳು ತನ್ನನ್ನು ತಾನು ಪರಿಷ್ಕರಿಸಿ ಕೊಳ್ಳುತ್ತಲೇ ಸಾಗಬೇಕಾಗಿದೆ. ತಕ್ಷಣದ ಸಾಮಾಜಿಕ ಸಮಸ್ಯೆಗಳನ್ನು ನೇರವಾಗಿ ಹೇಳಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಕಲೆಯನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಧ್ವನಿ ಪೂರ್ಣವಾಗಿ ಹಾಗೂ ಸೂಚ್ಯಾರ್ಥದ ಮೂಲಕ ಜನರನ್ನು ತಲುಪಬೇಕು. ಕಲೆಯನ್ನು ಆಸ್ವಾದಿಸುವ ಶಿಕ್ಷಣವೇ ನಮ್ಮಲ್ಲಿಲ್ಲ. ಇವನ್ನು ದಾಟುವ ಸಾಧ್ಯತೆಗಳನ್ನು ನಾವು ಕಂಡುಕೊಳ್ಳಬೇಕಾಗಿದೆ. ರಂಗಭೂಮಿ ಎಲ್ಲಾ ಕಲಾ ಪ್ರಕಾರಗಳನ್ನು ಒಳಗೊಂಡಿರುವ ಒಂದು ಸಂಯುಕ್ತ ಕಲೆ. ಇದನ್ನು ಮೆಚ್ಚುವ, ಪ್ರಶಂಸಿಸುವ, ಹುಡುಕಾಟ ನಡೆಸುವ ಯುವ ಪೀಳಿಗೆಯನ್ನು ತಲುಪುವುದೇ ನಮಗೆ ಇಂದಿನ ತುರ್ತಾಗಿದೆ. ಅದಕ್ಕಾಗಿ ಚಿಂತನೆಗಳು ಕಾರ್ಯಸಾಧ್ಯ ಯೋಜನೆಗಳು ರೂಪುಗೊಳ್ಳಬೇಕಾಗಿದೆ ಎಂದು ಬಿ ಆರ್ ವೆಂಕಟರಮಣ ಐತಾಳ್ ಅಭಿಪ್ರಾಯ ಪಟ್ಟರು.

ರಂಗ ನಿರ್ದೇಶಕ ಜಿ ವಿ ಕಾರಂತರು 80ರ ದಶಕದಲ್ಲಿ ಕನ್ನಡ ರಂಗಭೂಮಿಯಲ್ಲಿ ಪ್ರಗತಿಪರ ಸಂಘಟನೆಯಾಗಿ ಸಮುದಾಯದ ಪಾತ್ರವನ್ನು ಹಾಗೂ ಅಂದಿನ ಬೀದಿ ನಾಟಕಗಳ ಸ್ವರೂಪಗಳನ್ನು ವಿವರಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಯೋಜನೆಗಳನ್ನು ವಿವರಿಸಿದರು. ಸಂವಾದದಲ್ಲಿ ಶಿವಮೊಗ್ಗ ಸಮುದಾಯದ ಅಧ್ಯಕ್ಷ ಡಾ. ವೆಂಕಟೇಶ್, ಪ್ರೊ ಹಯವದನ ಉಪಾಧ್ಯ. ಆನಂದ ಭಂಡಾರಿ, ಅಶ್ವತ್ ಕುಮಾರ್, ರಾಘವೇಂದ್ರ, ವಿದ್ಯಾರ್ಥಿನಿ ಆವಂತಿ ಹಾಗೂ ಇನ್ನಿತರರು ಪಾಲ್ಗೊಂಡರು. ಕುಂದಾಪುರ ಸಮುದಾಯದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರ್ ಅವರು ಸಮುದಾಯ ಕುಂದಾಪುರದ ಚಟುವಟಿಕೆಗಳನ್ನು ವಿವರಿಸಿದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿ ಸ್ವಾಗತಿಸಿದರು. ಗಣೇಶ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ವಾಸುದೇವ್ ಗಂಗೇರ ವಂದಿಸಿದರು.