ಬ್ರಹ್ಮಾವರ: ಬ್ರಹ್ಮಾವರ ಫೌಂಡೇಶನ್ನಿಂದ 291 ಮಂದಿಗೆ ಉಚಿತ ಕನ್ನಡಕ ವಿತರಣೆ
ಬ್ರಹ್ಮಾವರ: ಬ್ರಹ್ಮಾವರ ಫೌಂಡೇಶನ್ ವತಿಯಿಂದ ಪ್ರಸಾದ್ ನೇತ್ರಾಲಯ ಉಡುಪಿ, ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಬ್ರಹ್ಮಾವರ ಹಾಗೂ ಬ್ರಹ್ಮಾವರ ಅಭಿವೃದ್ಧಿ ಸಮಿತಿ ಸಹಯೋಗದೊಂದಿಗೆ 292 ಅರ್ಹ ಫಲಾನುಭವಿಗಳಿಗೆ ಭಾನುವಾರ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.

ಇದಕ್ಕೂ ಮುನ್ನ 2025ರ ಆಗಸ್ಟ್ ತಿಂಗಳಲ್ಲಿ ಎಸ್ಎಂಎಸ್ ಸಮುದಾಯ ಭವನದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಡೆಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ್ದ 528 ಮಂದಿ ಪೈಕಿ 292 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.

ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್ ಮಾತನಾಡಿ, ವರ್ಷದಲ್ಲಿ ನೂರಾರು ಶಿಬಿರಗಳನ್ನು ನಡೆಸುವ ನಮ್ಮ ಸಂಸ್ಥೆ ಬ್ರಹ್ಮಾವರ ಪೌಂಡೇಶನ್ ಜೊತೆಗೆ ಯಾವತ್ತೂ ಇರುತ್ತದೆ. ಪೌಂಡೇಶನ್ನಿನ ಅಧ್ಯಕ್ಷ ಬಿ. ಗೋವಿಂದ ರಾಜ್ ಹೆಗ್ಡೆ ಶ್ರಮ ನಿಜಕ್ಕೂ ಶ್ಲಾಘನೀಯ ಎಂದರು. ಬಡವರು ಮತ್ತು ಅಶಕ್ತರಿಗೆ ನೆರವಾಗುವ ಶಿಬಿರಗಳಲ್ಲಿ ಸಂಘಟನಾತ್ಮಕವಾಗಿ ಬ್ರಹ್ಮಾವರದ ಜನತೆಗೆ ಹಣ ಮತ್ತು ಸಮಯವನ್ನು ಉಳಿಸಿ ದೊಡ್ಡ ಮಟ್ಟದಲ್ಲಿ ಸೇವೆ ನೀಡುತ್ತಿರುವ ಗೋವಿಂದ ರಾಜ್ ಹೆಗ್ಡೆ ಬ್ರಹ್ಮಾವರದ ಆಸ್ತಿ ಎಂದರು.

ಬಿ. ಭುಜಂಗ ಶೆಟ್ಟಿ, ದಯಾನಂದ ಶೆಟ್ಟಿ, ಪ್ರತೀಕ್ ಹೆಗ್ಡೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 78 ಮಂದಿ ನೇತ್ರ ಶಸ್ತ್ರಚಿಕಿತ್ಸೆಗೆ ನೋಂದಾಯಿಸಿದ್ದು 38 ಮಂದಿ ಈಗಾಗಲೇ ಸರ್ಜರಿ ಮಾಡಿಕೊಂಡಿದ್ದಾರೆ.