ಕುದ್ರೋಳಿ: ಗೋಕರ್ಣನಾಥ ಕ್ಷೇತ್ರದಲ್ಲಿ ಸಂಭ್ರಮದ ವರಮಹಾಲಕ್ಷ್ಮೀ ವ್ರತಾಚರಣೆ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಲಲಿತಾ ಭಜನಾ ಮಂಡಳಿ ಮತ್ತು ವಿಶ್ವ ಬಿಲ್ಲವ ಮಹಿಳಾ ಸಂಘದ ಸಹಕಾರದೊಂದಿಗೆ ವೈಭವದ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ನಡೆಯಿತು.

ಕ್ಷೇತ್ರದಲ್ಲಿ ಬೆಳಗ್ಗಿನ ಪೂಜೆ ನೆರವೇರಿದ ಬಳಿಕ ಕಲಶ ಸ್ಥಾಪನೆ, ಅಭಿಷೇಕ, ಲಲಿತಾ ಸಹಸ್ರನಾಮ ಪಠಣ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯಿತು.
ಈ ಸಂದರ್ಭ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿ, ಮಾಲತಿ ಜೆ. ಪೂಜಾರಿ, ಕ್ಷೇತ್ರದ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರ್, ಉಪಾಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್, ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ಎಚ್.ಎಸ್.ಸಾಯಿರಾಂ, ಜಗದೀಪ್ ಡಿ.ಸುವರ್ಣ, ಕೃತಿನ್ ಡಿ. ಅಮೀನ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ರವಿಶಂಕರ್ ಮಿಜಾರು, ಶೇಖರ್ ಪೂಜಾರಿ, ಗೌರವಿ ರಾಜಶೇಖರ್, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಟ್ರಸ್ಟಿ ರಾಜೇಂದ್ರ ಚಿಲಿಂಬಿ ಮತ್ತಿತರರು ಉಪಸ್ಥಿತರಿದ್ದರು.

ಭಾರೀ ಜನಸ್ತೋಮ: ವರಮಹಾಲಕ್ಷ್ಮೀ ಪೂಜೆ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಬೆಳಗ್ಗಿನಿಂದಲೇ ಭಾರೀ ಸಂಖ್ಯೆಯಲ್ಲಿ ವ್ರತಾಧಾರಿಗಳು ಭಾಗವಹಿಸಿದ್ದರು. ಕ್ಷೇತ್ರಕ್ಕೆ ಆಗಮಿಸಿದ ಮಾತೆಯರಿಗೆ ಲಲಿತಾ ಭಜನಾ ಮಂಡಳಿ ಮತ್ತು ವಿಶ್ವ ಬಿಲ್ಲವ ಮಹಿಳಾ ಸಂಘದಿಂದ ಬಾಗಿನ ವಿತರಿಸಲಾಯಿತು. ಕ್ಷೇತ್ರದಲ್ಲಿ ನಡೆದ ಅನ್ನದಾನದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.
