ಕುಂದಾಪುರ: ಯಕ್ಷಗಾನದ ಉಳಿವಿಗೆ ಮಕ್ಕಳು ಮಾಧ್ಯಮವಾಗಬೇಕು – ಗೋಪಾಲ್ ವಿಷ್ಣು ಭಟ್

ಕುಂದಾಪುರ; ಎಳವೆಯಲ್ಲಿಯೇ ಯಕ್ಷಗಾನ ಕಲೆಯ ಪರಿಚಯ, ನಮ್ಮಿಂದ ನಮ್ಮ ಮಕ್ಕಳಿಗೆ ವರ್ಗಾವಣೆಯಾದರೆ, ಕಲೆಯನ್ನು ಉಳಿಸಿ ಬೆಳೆಸಲು ಮಹತ್ವದ ಹೆಜ್ಜೆಯಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಸಂಸ್ಕೃತಿ, ಶಿಸ್ತು, ಭಾಷಾ ಬೆಳವಣಿಗೆ, ಏಕಾಗ್ರತೆ, ಬೆಳೆಸಿ, ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳ ಬದುಕನ್ನು ಶ್ರೀಮಂತವಾಗಿಸುತ್ತದೆ. ಈ ಹವ್ಯಾಸ ಮುಂದೊಂದು ದಿನ ಕನಿಷ್ಠ ಒಬ್ಬ ಸಜ್ಜನ ಪ್ರೇಕ್ಷಕನನ್ನು ಸೃಷ್ಟಿಸುತ್ತದೆ” ಎಂದು ಮುಖ್ಯೋಪಾದ್ಯಾಯ ಗೋಪಾಲ್ ವಿಷ್ಣು ಭಟ್ ಹೇಳಿದರು.
ಅವರು ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ (ರಿ) ಉಡುಪಿ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಯಕ್ಷಗಾನ ತರಬೇತಿ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ನ ಯಕ್ಷ ಗುರು ಅನಂತ ಕುಣಬಿ ಮಾತನಾಡಿ, ರಾಗ ತಾಳ ಭಾವ ಲಯ ಅಭಿನಯ, ವಾಕ್ಚಾತುರ್ಯ, ಜ್ಞಾನ ಮತ್ತು ಸಂಸ್ಕೃತಿಯನ್ನೋಳಗೊಂಡ ಸಮಗ್ರ ಕಲೆ ಯಕ್ಷಗಾನ. ವಿಶ್ವವಾದ್ಯಂತ ವಿಜೃಂಭಿಸಿದ ನಮ್ಮ ಈ ಕಲೆ ಕಲಿಯುವುದರಿಂದ ಸಂಸ್ಕಾರವಂತರಾಗಲು, ಆದರ್ಶದ ವ್ಯಕ್ತಿತ್ವ ನಿರ್ಮಿಸಿಕೊಳ್ಳುವಲ್ಲಿ ಬಹು ಅವಶ್ಯಕವಾದುದು ಎಂದರು.
ಶಿಕ್ಷಕಿ ರಜನಿ ಹೆಗಡೆ, ಜ್ಯೋತಿ, ರತ್ನ, ನಿತ್ಯಾನಂದ ಶೆಟ್ಟಿ, ಅಜಯ್ ಕುಮಾರ್ ಶೆಟ್ಟಿ, ಅಣ್ಣಪ್ಪ ಎಂ ಗೌಡ, ಸಂತೋಷ್, ಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು. ಪೋಷಕರು,ವಿದ್ಯಾರ್ಥಿಗಳು ಹಾಜರಿದ್ದರು. ಕುಮಾರಿ ಸಾಕ್ಷಿ ಮತ್ತು ತಂಡದವರು ಪ್ರಾರ್ಥಿಸಿ, ರಜನಿ ಹೆಗಡೆ ಸ್ವಾಗತಿಸಿದರು. ಸಹ ಶಿಕ್ಷಕ ಸಂತೋಷ್ ನಿರೂಪಿಸಿ, ವಂದಿಸಿದರು.
