ಮಳೆಯೆಲ್ಲಾ ಹೊರಗೆ ನೀರೆಲ್ಲಾ ಒಳಗೆ!: ಆಜ್ರಿಯಲ್ಲೊಂದು ಅಪಾಯಕಾರಿ ಬಸ್ ನಿಲ್ದಾಣ
ಕುಂದಾಪುರ: ಸುಮಾರು ಮೂವತ್ತು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಬಸ್ ನಿಲ್ದಾಣವೊಂದು ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಾಲಿಗೆ ಅಪಾಯ ಆಹ್ವಾನಿಸುತ್ತಿದೆ. ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರೆಬೇರುಕಟ್ಟೆ ಎಂಬಲ್ಲಿ ಈ ಅಪಾಯಕಾರಿ ಬಸ್ ತಂಗುದಾಣವಿದೆ.

ಮೋರ್ಟು, ರಾಮನಕೊಡ್ಲು, ಅರ್ಗೋಡು, ಬೆಳುವನ, ಕುದ್ರೆಬೇರುಕಟ್ಟೆ, ದ್ಯಾಗೇರಿ, ಮೆಟ್ಸಂಕ, ಮೇಲ್ಬೆಳುವನ ಸುತ್ತಮುತ್ತಲಿನ ಶಾಲೆ ಮಕ್ಕಳೇ ಹೆಚ್ಚಾಗಿ ಈ ಬಸ್ ನಿಲ್ದಾಣವನ್ನು ಬೆಳಿಗ್ಗೆ ಮತ್ತು ಸಂಜೆ ಆಶ್ರಯಿಸುತ್ತಿದ್ದಾರಾದರೂ ಸಂಪೂರ್ಣ ಶಿಥಿಲಗೊಂಡಿರುವ ಈ ಬಸ್ ನಿಲ್ದಾಣದ ಒಳಗೆ ನಿಂತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಂತೂ ನೀರೆಲ್ಲಾ ಒಳಗೆ ಮಳೆಯೆಲ್ಲಾ ಹೊರಗೆ ಎನ್ನುವಂತಾಗಿದೆ ಈ ಬಸ್ ನಿಲ್ದಾಣದ ಸ್ಥಿತಿ. ಒಳಗೆ ನಿಂತುಕೊಂಡರೆ ಎಲ್ಲಿ ತಲೆ ಮೇಲೆ ಹಂಚುಗಳು ಕುಸಿದು ಬೀಳುತ್ತವೋ ಎನ್ನುವ ಭಯ ಕಾಡುತ್ತಿದೆ. ಹೀಗಾಗಿ ಪ್ರಯಾಣಿಕರು ಬಸ್ ನಿಲ್ದಾಣದ ಹೊರಗೆ ಬಸ್ಸಿಗಾಗಿ ಕಾಯುವ ಸ್ಥಿತಿ ಬಂದೊದಗಿದೆ.

ಕಳೆದ ಮೂರು ವರ್ಷಗಳಿಂದ ಇದೇ ಸ್ಥಿತಿಯಿಲ್ಲಿರುವ ಈ ಬಸ್ ನಿಲ್ದಾಣದ ದುರಸ್ಥಿಗೆ ಇಲ್ಲಿನ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಪ್ರತಿದಿನ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಗ್ರಾಮದ ಪ್ರಯಾಣಿಕರು ಬಸ್ಸಿಗಾಗಿ ಇದೇ ಬಸ್ ನಿಲ್ದಾಣವನ್ನು ಆಶ್ರಯಿಸಿದ್ದರೂ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಜನಪ್ರತಿನಿದಿಗಳು ಜಾಣ ಮೌನ ವಹಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಜ್ರಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೋಪಾಲ್ ಅವರು, ಬಸ್ ನಿಲ್ದಾಣದ ದುರಸ್ಥಿಗೆ 50 ಸಾವಿರ ರೂಪಾಯಿ ಅನುದಾನ ಮೀಸಲಿಟ್ಟಿದ್ದು, ಮುಂದಿನ ತಿಂಗಳೊಳಗೆ ಬಸ್ ನಿಲ್ದಾಣ ದುರಸ್ತಿಗೊಳಿಸಲಾಗುವುದು ಎಂದಿದ್ದಾರೆ.
