ಚಾಮರಾಜನಗರ: ವಿಷ ಪ್ರಾಷನದಿಂದ ತಾಯಿ, ಮರಿಗಳ ಸಹಿತ 5 ಹುಲಿಗಳ ಸಾವು
ಚಾಮರಾಜನಗರ: ಇಲ್ಲಿನ ಮಲೆಮಹದೇಶ್ವರ ವನ್ಯಧಾಮದಲ್ಲಿ ಗೋವಿನ ಮಾಂಸದಲ್ಲಿದ್ದ ವಿಷ ಪ್ರಾಷನ ಮಾಡಿದ ತಾಯಿ ಹುಲಿ ಹಾಗೂ ಮರಿ ಹುಲಿಗಳು ಸೇರಿ ಐದು ಹುಲಿಗಳು ದಾರುಣವಾಗಿ ಸಾವನ್ನಪ್ಪಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಸ್ಪಷ್ಟಪಡಿಸಿದ್ದಾರೆ. ಘಟನೆಯಿಂದ ಎಂಟು ವರ್ಷ ಪ್ರಾಯದ ತಾಯಿ ಹುಲಿ ಮತ್ತು ಹತ್ತು ತಿಂಗಳು ಪ್ರಾಯದ ನಾಲ್ಕು ಮರಿ ಹುಲಿಗಳು ಸಾವನ್ನಪ್ಪಿವೆ.

ತಾಯಿ ಹುಲಿ ಹಸುವಿನ ಹಿಂಭಾಗದಿಂದ ದಾಳಿ ಮಾಡಿ, ಗೋವಿನ ಮಾಂಸ ಸೇವನೆ ಮಾಡಿತ್ತು. ಮರಿ ಹುಲಿಗಳೂ ಅದೇ ಗೋವಿನ ಮಾಂಸ ತಿಂದಿದ್ದವು ಎನ್ನಲಾಗಿದೆ. ಆದರೆ ಯಾವ ವಿಷ ಸೇವನೆ ಮಾಡಲಾಗಿದೆ ಎನ್ನುವುದು ವರದಿಯ ಬಳಿಕ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ. ಇಷ್ಟಕ್ಕೂ ಹುಲಿ ದಾಳಿಯ ಬಳಿಕ ಸತ್ತ ಗೋವಿಗೆ ವಿಷ ಹಾಕಲಾಗಿತ್ತೇ ಅಥವಾ ಮೊದಲೇ ಗೋವಿಗೆ ವಿಷವುಣಿಸಲಾಗಿತ್ತೇ ಎನ್ನುವುದು ಕೂಡಾ ಲ್ಯಾಬ್ ವರದಿಯಿಂದ ತಿಳಿಯಬೇಕಿದೆ. ಹುಲಿ ಮತ್ತು ಹಸುವಿನ ಎಲ್ಲಾ ಅಂಗಾಂಗಳನ್ನ ಲ್ಯಾಬ್ ಕಳುಹಿಸಲಾಗಿದೆ.
ಅರಣ್ಯ ಕಾವಲುಗಾರರಿಗೆ ಈ ಬಾರಿ ವೇತನ ತಡವಾಗಿದ್ದ ಕಾರಣಕ್ಕೆ ಕಾವಲುಗಾರರು ಪಹರೆ ಮಾಡಿಲ್ಲ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಯಲಿದೆ ಎಂದು ತಿಳಿಸಿದ ಅವರು, ಸಾವನ್ನಪ್ಪಿರುವ ಹಸು ಯಾರಿಗೆ ಸೇರಿದ್ದು, ಸ್ಥಳೀಯರದ್ದೇ ಅಥವಾ ತಮಿಳುನಾಡಿನಿಂದ ಬಂದಿದೆಯಾ ಎನ್ನುವದರ ಬಗ್ಗೆಯೂ ತನಿಖೆ ನಡೆಯಲಿದೆ. ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
