ಅಂಪಾರು: ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪದ ಪ್ರಧಾನ ಕಾರ್ಯಕ್ರಮ
ಕುಂದಾಪುರ: ಇಲ್ಲಿನ ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಹಿರಿಮೆ, ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳುವ ಹಾಗೂ ನಾಯಕತ್ವ ಗುಣ ಬೆಳೆಸಿ ಕೊಳ್ಳುವ ಮೂಲ ಉದ್ದೇಶದಿಂದ ಶಾಲಾ ಸಂಸತ್ ಚುನಾವಣೆಯನ್ನು ನೈಜ ಸಾರ್ವಜನಿಕ ಚುನಾವಣಾ ಮಾದರಿಯಲ್ಲಿ ನಡೆಸಿದ ಬಳಿಕ ವಿದ್ಯಾರ್ಥಿಗಳ ನೂತನ ಸಂಸತ್ತಿನ ಪದ ಪ್ರಧಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ನೂತನ ಸಂಸತ್ ನ ಚುನಾಯಿತ ಪ್ರತಿನಿಧಿಗಳಿಗೆ ಶಾಲಾ ಧ್ವಜ ಹಸ್ತಾಂತರ ಮಾಡಿ ಲಾಂಛನ ನೀಡಿ ಗೌರವಿಸಲಾಯಿತು. ಶಾಲಾ ನಾಯಕಿಯಾಗಿ 8ನೇಯ ತರಗತಿಯ ವಿದ್ಯಾರ್ಥಿನಿ ಕುಮಾರಿ ಸನ್ವಿತಾ, ಉಪನಾಯಕನಾಗಿ 8ನೇ ತರಗತಿ ವಿದ್ಯಾರ್ಥಿ ಪ್ರಶೀಲ್ ಪ್ರಮಾಣ ವಚನ ಸ್ವೀಕರಿಸಿದರು. ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕ ಹಾಗೂ ಸಹಕಾರಿಯಾಗುವಂತೆ ನಾಲ್ಕು ತಂಡಗಳನ್ನು ಮತ್ತು ನಾಲ್ಕು ಕ್ಲಬ್ ಗಳನ್ನು ರಚಿಸಲಾಯಿತು. ಈ ಕ್ಲಬ್ ಗಳ ಮಾರ್ಗದರ್ಶಿ ಶಿಕ್ಷಕಿಯರು ಕ್ಲಬ್ ನ ಉದ್ದೇಶ, ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಪ್ರಸ್ತುತ ಪಡಿಸಿದರು.
ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಶಾಲಾ ಸಂಸತ್ತಿನಿಂದ ಉತ್ತಮ ನಾಯಕರನ್ನು ಆರಿಸುವ ಗುರುತರ ಜವಾಬ್ದಾರಿ ದೊರೆಯುತ್ತದೆ. ಆಯ್ಕೆಯಾದ ನಾಯಕರು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತಾಗಲಿ ಎಂದರು.
ಟ್ರಸ್ಟಿನ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ ಶಾನ್ಕಟ್ಟು ಹಾಗೂ ಟ್ರಸ್ಟಿ ಉಮೇಶ್ ಕೊಠಾರಿ ನಾಯಕತ್ವದ ಮಹತ್ವವನ್ನು ತಿಳಿಸಿದರು. ಟ್ರಸ್ಟಿನ ಖಜಾoಚಿ ಕೊಡ್ಲಾಡಿ ಸುಭಾಶ್ಚoದ್ರ ಶೆಟ್ಟಿ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ನೆರವೇರಿಸಿ, ಚುನಾಯಿತ ಪ್ರತಿನಿಧಿಗಳಿಗೆ ಹೇಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು, ಯಾವ ಕ್ಷೇತ್ರದಲ್ಲೇ ಇದ್ದರೂ ಜೀವನದಲ್ಲಿ ನಾಯಕತ್ವ ಗುಣ ಸಹಕಾರಿಯಾಗುತ್ತದೆ ಎಂದರು.
ಶಾಲಾ ಆಡಳಿತಧಿಕಾರಿ ಚೈತ್ರ ಯಡಿಯಾಳ್ ಕಾರ್ಯಕ್ರಮ ಸಂಯೋಜಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಿಲಾಸಿನಿ ಶೆಟ್ಟಿ ಶುಭ ಹಾರೈಸಿದರು. ಶಿಕ್ಷಕಿ ಶೈಲಜಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕಿ ಸರೋಜಾ ಇವರು ವಂದಿಸಿದರು.ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
