ಜೂನ್ 26: ಜಾಗತಿಕ ಯುದ್ಧ ಕಾರ್ಮೋಡ ತಪ್ಪಿಸಲು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಶತಸಿಯಾಳಾಭಿಷೇಕ, ವಿಶೇಷ ಪೂಜೆ

ಮಂಗಳೂರು: ಜಾಗತಿಕ ಯುದ್ಧಕಾರ್ಮೋಡ ತಪ್ಪಿಸಲು ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಜೂನ್ 26ರಂದು ಶತಸಿಯಾಳಾಭಿಷೇಕ ಹಾಗೂ ವಿಶೇಷ ಪೂಜೆ ಜರುಗಲಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಜ್ ಎಚ್.ಸೋಮಸುಂದರಂ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿದೆ. ಆದರೆ ಯುದ್ಧ ಯಾವುದಕ್ಕೂ ಪರಿಹಾರವಲ್ಲ. ಯುದ್ಧದಿಂದಾಗಿ ಸಹಸ್ರಾರು ಅಮಾಯಕರು ಬಲಿಯಾಗುತ್ತಾರೆ. ಜತೆಗೆ ಜಗತ್ತಿನಾದ್ಯಂತ ಆರ್ಥಿಕ ಸ್ಥಿತಿ ಹದಗೆಟ್ಟು ಜನಸಾಮಾನ್ಯರು ತೊಂದರೆ ಅನುಭವಿಸ ಬೇಕಾಗುತ್ತದೆ. ಯುದ್ಧವನ್ನು ತಪ್ಪಿಸಲು ಮಾನವರಿಂದ ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ಸರಿಹೋಗುವ ಸಾಧ್ಯತೆ ಕಾಣುತ್ತಿಲ್ಲ. ಇದರಿಂದ ದೇವರ ಮೊರೆ ಹೋಗುವುದೊಂದೇ ದಾರಿ. ಈ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಜೂನ್ 26ರಂದು ಗುರುವಾರ ಬೆಳಗ್ಗೆ 11.15ಕ್ಕೆ ಶತಸೀಯಾಳಾಭಿಷೇಕ ಮತ್ತು ವಿಶೇಷ ಪೂಜೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶ್ವಶಾಂತಿಗಾಗಿ ಪ್ರಾರ್ಥಿಸಬೇಕು ಎಂಬುದಾಗಿ ವಿನಂತಿಸಿದ್ದಾರೆ.
