ಗಂಗೊಳ್ಳಿ: ಮಳೆ ಆರಂಭದಲ್ಲಿಯೇ ಕಡಲ್ಕೊರೆತ ಭೀತಿ : ತಡೆಗೋಡೆ ನಿರ್ಮಾಣಕ್ಕೆ ಶಾಸಕರಿಗೆ ಗ್ರಾಮಸ್ಥರ ಆಗ್ರಹ
ಕುಂದಾಪುರ : ತ್ರಾಸಿ, ಹೊಸಪೇಟೆ, ಕಂಚುಗೋಡು ಮೊದಲಾದ ಕಡೆಗಳಲ್ಲಿ ಕಡಲ್ಕೊರೆತದಿಂದ ಹಾನಿ ಸಂಭವಿಸುತ್ತಿದ್ದು, ತಡೆಗೋಡೆ ನಿರ್ಮಿಸುವ ಅಗತ್ಯತೆ ಬಗ್ಗೆ ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು ಅವರು ಬೈಂದೂರು ಶಾಸಕ ಗುರುರಾಜ್ ಗಂಟಿಗೊಳೆ ಗಮನ ಸೆಳೆದು ಆಗ್ರಹಿಸಿದ್ದರು.

ಮನವಿಗೆ ಸ್ಪಂದಿಸಿದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಬಂದರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತಡೆಗೋಡೆ ನಿರ್ಮಾಣಕ್ಕೆ ಬೇಕಾದ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಶಾಸಕರ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ ಬಂದರು ಮತ್ತು ಮೀನುಗಾರಿಕೆ ಇಲಾಖೆ ಇಂಜಿನಿಯರ್ ಭಾನುಪ್ರಕಾಶ್, ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿದರು. ತಡೆಗೋಡೆ ನಿರ್ಮಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು ಹಾಗೂ ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.
