ವಿದ್ಯಾರಣ್ಯ; ಚಿಂತನೆಯೊಂದಿಗೆ ಅಧ್ಯಯನ ಮಾಡಿದಾಗ ಯಶಸ್ಸು – ವಿಧುಶೇಖರಭಾರತೀ ಸ್ವಾಮೀಜಿ


ಕುಂದಾಪುರ: ಸ್ಪಷ್ಟವಾದ ಚಿಂತನೆಯೊಂದಿಗೆ ಅಧ್ಯಯನಶೀಲರಾದಾಗ ಯಶಸ್ಸಿನ ಗುರಿ ಮುಟ್ಟಲು ಸಾಧ್ಯ. ಶಿಕ್ಷಣ ಎಂದರೆ ತನ್ನೊಳಗಿನ ಪ್ರತಿಭೆಯನ್ನು ಅನಾವರಣಗೊಳಿಸಲು ನಾವು ಪಡೆಯುವ ಅವಕಾಶ. ವಿದ್ಯೆಯೊಂದಿಗೆ ಸಂಸ್ಕಾರ ಬೆಳೆಸಿಕೊಂಡಾಗ ಮಕ್ಕಳು ಆದರ್ಶವಾಗಿ ಬೆಳೆಯುತ್ತಾರೆ ಎಂದು ಶೃಂಗೇರಿ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಆಶೀರ್ವಚನ ನೀಡುತ್ತಾ ಹೇಳಿದರು.


ಅವರು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸುಜ್ಞಾನ ಪಪೂ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರಣ್ಯ ಕ್ಯಾಂಪಸ್, ಯಡಾಡಿ-ಮತ್ಯಾಡಿ, ಕುಂದಾಪುರ ಇಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ಭಾರತೀತೀರ್ಥ ಅನುಗ್ರಹದಿಂದ ನಡೆದ ಅಕ್ಷರಾಭ್ಯಾಸ ಮತ್ತು ಸುವಿದ್ಯಾರಂಭ, ವಾಣಿ ವಿಲಾಸ ವಿದ್ಯಾರ್ಥಿ ನಿಲಯ ಹಾಗೂ ನೂತನ ಕಟ್ಟಡವನ್ನು ದೀಪ ಪ್ರಜ್ವಲನಗೊಳಿಸಿ ಮಾತನಾಡಿದರು.


ಇದೇ ಸಂದರ್ಭ ಶಾಲಾ ಕಟ್ಟಡದಲ್ಲಿ ಶಾರದ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮಾಡಿ, ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರಂಭವನ್ನು ನೆರವೇರಿಸಿರು.ಮತ್ತು ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದವರನ್ನು ಗೌರವಿಸಿದರು. ನಿವೃತ್ತ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ಮಕ್ಕಳನ್ನು ಆಸಕ್ತಿ ಇರುವ ಕ್ಷೇತ್ರಗಳಿಗೆ ಹಾಕಿ ತರಬೇತಿ ನೀಡಿದಾಗ ಸಮಾಜದ ಆಸ್ತಿಯಾಗಿ ಬೆಳೆದು ಕೀರ್ತಿ ಸಂಪಾದಿಸುತ್ತಾರೆ ಎಂದರು. ಉಡುಪಿ ಬಡಗುಬೆಟ್ಟು ಕೋ-ಆಪ ರೇಟಿವ್ ಸೊಸೈಟಿ ಇದರ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಶುಭ ಹಾರೈಸಿದರು.


ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ, ಶ್ರೀ ಶಾರದಾ ಪೀಠ ಶೃಂಗೇರಿ ಪ್ರಾಂತೀಯ ಧರ್ಮಾಧಿಕಾರಿ ವೇ|ಮೂ| ಲೋಕೇಶ ಅಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ರಘುರಾಮ ದೇವಾಡಿಗ, ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸುಜ್ಞಾನ ಪಪೂ ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ ಮತ್ತು ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ. ಉಪಸ್ಥಿತರಿದ್ದರು.


ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಶಿಕ್ಷಕ ರಜತ ಭಟ್ ನಿರೂಪಿಸಿದರು.
