ಸಿದ್ದಾಪುರ: ವಿಶ್ವ ಪರಿಸರ ದಿನದ ಅಂಗವಾಗಿ ಸರಸ್ವತಿ ವಿದ್ಯಾಲಯದಲ್ಲಿ ಶ್ರೀ ವೃಕ್ಷಂ ಕಾರ್ಯಕ್ರಮ
ಕುಂದಾಪುರ: ಪರಿಸರ ಮತ್ತು ಮನುಷ್ಯರ ನಡುವಿನ ಸಂಬಂಧ ಅವಿನಾಭಾವ. ಪ್ರಾಣವಾಯು ನೀಡುವ ಹಸಿರು ಪರಿಸರವನ್ನು ಉಳಿಸಿ ಬೆಳೆಸಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಔಷಧೀಯ ಗಿಡ ಮರಗಳನ್ನು ಬೆಳೆಸುವುದು ಹೆಚ್ಚು ಔಚಿತ್ಯಪೂರ್ಣ ಎಂದು ಸಿದ್ದಾಪುರದ ಶ್ರೀ ಲಕ್ಷ್ಮೀ ಧನ್ವoತರಿ ಚಿಕಿತ್ಸಾಲಯದ ಡಾ. ಚೈತ್ರಾ ರಂಜಿತ್ ಶೆಟ್ಟಿ ಹೇಳಿದರು.

ಅವರು ಮಂಗಳವಾರ ಸಿದ್ದಾಪುರದ ಸರಸ್ವತಿ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ಲಕ್ಷ್ಮೀ ಧನ್ವoತರಿ ಚಿಕಿತ್ಸಾಲಯ ಹಮ್ಮಿಕೊಂಡ “ಶ್ರೀ ವೃಕ್ಷಮ್” To honour the presence of Devine Sustainers of Life ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೃಕ್ಷಗಳು ನಮ್ಮ ಸುತ್ತಲೂ ಇರುವುದರಿಂದ ಆಗುವ ಅಭೌತಿಕ ಲಾಭಗಳು, ವೃಕ್ಷಗಳಿಗೂ ಇರುವ ಭಾವನೆಗಳ ಹಾಗೂ ವೃಕ್ಷ ಪ್ರೇಮದ ಕುರಿತು ಅವರು ವಿವರಿಸಿದರು.

ಜ್ಞಾನಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಅವರು, ಸಸ್ಯಗಳ ಬೆಳವಣಿಗೆಗೆ ಹೇಗೆ ಸಂಗೀತ ಇತ್ಯಾದಿ ಪರಿಕ್ರಮಗಳು ಸಹಾಯಕವಾಗುತ್ತದೆ ಮತ್ತು ಉತ್ತಮ ಜೀವಿತಕ್ಕೆ ನಮ್ಮ ಸುತ್ತಲೂ ಇರುವ ಹಸಿರಿನ ಮಹತ್ವವನ್ನು ವಿವರಿಸಿದರು. ಸರಸ್ವತಿ ವಿದ್ಯಾಲಯದ ಮುಖ್ಯೋಪಾದ್ಯಾಯಿನಿ ಶ್ವೇತಾ ಅವರು, ಕೇವಲ ಗಿಡಗಳನ್ನು ನೆಟ್ಟರೆ ಸಾಲದು. ಅವುಗಳನ್ನು ಸಾಕುವ ಜವಾಬ್ದಾರಿ ತೆಗೆದುಕೊಂಡಾಗ ಪರಿಸರ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.

ಇದೇ ಸಂದರ್ಭ 8ನೇ ಹಾಗೂ 9ನೇ ತರಗತಿಯ ಪ್ರತಿ ವಿದ್ಯಾರ್ಥಿನಿಯರಿಗೆ ಒಂದೊಂದು ಅಶೋಕ ವೃಕ್ಷದ ಸಸಿ ಹಾಗೂ ಪ್ರತಿ ವಿದ್ಯಾರ್ಥಿಗಳಿಗೆ ಫಲಾಷ ವೃಕ್ಷದ ಸಸಿಗಳನ್ನು ನೀಡಲಾಯಿತು. ಈ ವರ್ಷ ನೀಡಲ್ಪಟ್ಟ ಸಸಿಗಳನ್ನು ಅತ್ಯಂತ ಉತ್ತಮವಾಗಿ ಪೋಷಿಸಿದ ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ವಿದ್ಯಾರ್ಥಿನಿಗೆ 2026ರ ವಿಶ್ವ ಪರಿಸರ ದಿನ “ವೃಕ್ಷ ಶ್ರೀ” ಎಂಬ ಪಾರಿತೋಷಕದೊಂದಿಗೆ ನಗದು ಬಹುಮಾನ ನೀಡಲಾಗುತ್ತದೆ ಶಿಕ್ಷಕಿಯರಾದ ಶ್ವೇತಾ ಸ್ವಾಗತಿಸಿದರೆ ಅನುಷಾ ವಂದಿಸಿದರು.ಸ್ಮಿತಾ ನಿರೂಪಿಸಿದರು.