ಹಾಡಹಗಲೇ ಪೇಟೆಯಲ್ಲಿ ಸಂಚರಿಸಿದ ಕಾಡಾನೆ- ಸಿದ್ಧಾಪುರ ಸಂತೆ ಸಹಿತ ಶಾಲಾ ಕಾಲೇಜಿಗೆ ರಜೆ

ಕುಂದಾಪುರ: ಹಾಡಹಗಲೇ ಕಾಡಾನೆಯೊಂದು ನಾಡಿಗೆ ಬಂದು ಪೇಟೆಯಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಇದರಿಂದಾಗಿ ಬುಧವಾರ ಕುಂದಾಪುರ ತಾಲೂಕು ಆಡಳಿತ ಸಿದ್ಧಾಪುರ ಮತ್ತು ಆಸುಪಾಸಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಅಲ್ಲದೇ ಇಂದು ನಡೆಯಬೇಕಿದ್ದ ವಾರದ ಸಂತೆಯೂ ರದ್ದಾಗಿದೆ. ಮಂಗಳವಾರ ಸಂಜೆ ಉಡುಪಿ- ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾದ ಬಾಳೆಬರೆಘಾಟಿ ರಸ್ತೆಯಲ್ಲಿ ಗಂಡು ಕಾಡಾನೆಯೊಂದು ದಾರಿತಪ್ಪಿ ರಾಜ್ಯ ಹೆದ್ದಾರಿಯಲ್ಲಿ ನಡೆದು ಮಂಗಳವಾರ ಸಂಜೆ ಕುಂದಾಪುರ ತಾಲೂಕಿನ ಹೊಸಂಗಡಿ ಕಡೆಗೆ ಸಂಚರಿಸಿದೆ. ಆನೆಯ ಸಂಚಾರವನ್ನು ಮಾಸ್ತಿಕಟ್ಟೆಯ ಅರಣ್ಯ ಚೆಕ್ ಪೋಸ್ಟ್ನ ಸಿಬಂದಿ ಹಾಗೂ ವಾಹನ ಸವಾರರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

ಹಾಸನ ಕಾಡಿನ ಆನೆ ಕಾರಿಡಾರ್ನಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ಸುಮಾರು 12 ವರ್ಷ ಪ್ರಾಯದ ಗಂಡು ಕಾಡಾನೆಯು ದಾರಿ ತಪ್ಪಿ ವಾರದ ಹಿಂದೆ ಕೊಪ್ಪದ ಮೂಲಕ ಶಿವಮೊಗ್ಗ ಜಿಲ್ಲೆಗೆ ಬಂದಿದೆ. ಆನೆಗೆ ಕಾಲರ್ ಐಡಿ ಇದ್ದು ಜಿಲ್ಲೆಯ ಡ್ಯಾಂನ ಮುಳುಗಡೆಯ ಹಿನ್ನೀರಿನ ಕಾಡು ಮಾರ್ಗಗಳ ಮೂಲಕ ತೀರ್ಥಹಳ್ಳಿಯ ವ್ಯಾಪ್ತಿಗೆ ಬಂದಿದೆ. ಬಳಿಕ ನಗರ ವನ್ಯಜೀವಿ ವಿಭಾಗದ ಅರಣ್ಯದ ಕಡೆಗೆ ಬಂದಿದ್ದು 3 ದಿನಗಳಿಂದ ನಗರ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿತ್ತು. ಮಂಗಳವಾರ ಸಂಜೆ ಮಾಸ್ತಿಕಟ್ಟೆಯ ಅರಣ್ಯ ಚೆಕ್ ಪೋಸ್ಟ್ ದಾಟಿ ರಾಜ್ಯ ಹೆದ್ದಾರಿಯ ಮೂಲಕ ಹೊಸಂಗಡಿ ಕಡೆಗೆ ಬಂದಿದೆ. ಕಾಡಾನೆಯ ಸಂಚಾರದ ಬಗ್ಗೆ ಅರಣ್ಯ ಚೆಕ್ ಪೋಸ್ಟ್ ಸಿಬಂದಿ ಹಾಗೂ ವಾಹನ ಸವಾರರು ವಿಡಿಯೋ ಮಾಡಿದ್ದಾರೆ. ಅಲ್ಲದೇ ಬಾಳೆಬರೆ ಶ್ರೀ ಚಂಡಿಕಾಂಬಾ ದೇವಸ್ಥಾನದ ಎದುರು ಹೆದ್ದಾರಿಯಲ್ಲಿ ಕಾಡಾನೆಯು ಸಾಗುತ್ತಿರುವ ದೃಶ್ಯವನ್ನು ಭಕ್ತರು ಹಾಗೂ ಆರ್ಚಕರು, ಸಿಬಂದಿ ಕಂಡು ಭೀತರಾಗಿದ್ದಾರೆ.

ಕಾಡಾನೆ ಸಂಚಾರದಿಂದ ಶಾಲೆ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ರಕ್ಷಣೆಯ ಹಿತದೃಷ್ಟಿಯಿಂದ ಇಂದು ಬುಧವಾರ ಸಿದ್ಧಾಪುರ ಸುತ್ತಮುತ್ತಲಿನ ಶಾಲಾ ಕೇಲೇಜುಗಳಿಗೆ ರಜೆ ಘೋಷಣೆ ಮಾಡಿ ಕುಂದಾಪುರ ತಾಲೂಕು ಆಡಳಿತ ಆದೇಶ ನೀಡಿದೆ. ಅದರಂತೆ ಸಿದ್ದಾಪುರ, ಹೊಸಂಗಡಿ ಮತ್ತು ಕಮಲಶಿಲೆ ಗ್ರಾಮಗಳ ವ್ಯಾಪ್ತಿಯ ಎಲ್ಲ ಅಂಗನವಾಡಿ ಕೇಂದ್ರಗಳು, ಶಾಲೆಗಳು ಮತ್ತು ಪ್ರೌಢಶಾಲಾ ವಿಭಾಗಕ್ಕೆ ಇಂದು ರಜೆ ಘೋಷಣೆ ಮಾಡಲಾಗಿದೆ. ಸಾರ್ವಜನಿಕರು ಭಯಭೀತರಾಗದೆ ಜಾಗರೂಕತೆಯಿಂದ ಓಡಾಡಬೇಕು ಎಂದು ತಿಳಿಸಲಾಗಿದೆ. ಇತ್ತ ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಹಾಸನದ ಎಲಿಫೆಂಟ್ ಟಾಸ್ಕ್ ಪೋರ್ಸ್ (ಇಟಿಎಫ್) ತಂಡ, ಸಿದ್ದಾಪುರ, ಅಮಾಸೆಬೈಲು, ನಗರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು, ಶಂಕರನಾರಾಯಣ ವಲಯಾರಣ್ಯಾಧಿಕಾರಿಗಳ ತಂಡ ಭಾಗವಹಿಸಿದೆ.