ಪಡೆದುದನ್ನು ಸಮರ್ಪಕವಾಗಿ ಬಳಸಿಕೊಂಡಾಗ ದಾನ ಸಾರ್ಥಕ – ಸುಬ್ರಹ್ಮಣ್ಯ ಶೆಟ್ಟಿ
ಕುಂದಾಪುರ: ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ದಾನಿಗಳು ಮಕ್ಕಳಿಗೆ ಪುಸ್ತಕ ಮೊದಲಾದ ಶೈಕ್ಷಣಿಕ ಪೂರಕ ವಸ್ತುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ದಾನಿಗಳ ಉದ್ದೇಶ ಈಡೇರಬೇಕಾದರೆ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಉತ್ತಮ ಶೈಕ್ಷಣಿಕ ಸಾಧನೆ ಮಾಡಬೇಕು. ಉಚಿತವಾಗಿ ನೀಡಿದ ಶೈಕ್ಷಣಿಕ ಸಾಮಾಗ್ರಿಗಳ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿಕೊಳ್ಳಬಾರದು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.

ಗಂಗೊಳ್ಳಿ ಲೈಟ್ಹೌಸ್ನ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ವತಿಯಿಂದ ಗಂಗೊಳ್ಳಿಯ ಶ್ರೀ ರಾಮ ಮಂದಿರದಲ್ಲಿ ಭಾನುವಾರ ಜರಗಿದ 22ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಉದ್ಯಮಿ ಶರತ್ ಕುಮಾರ್ ರಾವ್ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರಾಂಕ್ ಪಡೆದ ಸುಶ್ಮಿತಾ ಎಸ್.ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯ ರಾಜೇಂದ್ರ ಶೇರುಗಾರ್, ಪತ್ರಕರ್ತ ಬಿ.ರಾಘವೇಂದ್ರ ಪೈ, ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಶುಭಾಶಂಸನೆಗೈದರು. ಸಂಘದ ಅಧ್ಯಕ್ಷ ಚಂದ್ರ ಕೆ.ಖಾರ್ವಿ, ಕಾರ್ಯದರ್ಶಿ ಚೇತನ್ ಖಾರ್ವಿ, ಸ್ಥಾಪಕ ಅಧ್ಯಕ್ಷ ಮಡಿ ಮಾಧವ ಖಾರ್ವಿ, ಶ್ರೀ ಜಟ್ಟಿಗೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ಜಯಂತಿ ಜಿ.ಖಾರ್ವಿ, ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಸುಂದರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಡಿ ವಿಶ್ವನಾಥ ಖಾರ್ವಿ ವಂದಿಸಿದರು. ಲೈಟ್ಹೌಸ್ ಹಾಗೂ ಖಾರ್ವಿಕೇರಿ ಪರಿಸರದ ಸುಮಾರು ೧೩೦ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.