ಕುಂಭಾಶಿ: ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನಿಂದ ಆನೆಗುಡ್ಡೆ ಸ್ವಚ್ಛತೆ
ಕುಂದಾಪುರ: ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ಭಾನುವಾರ ಬೆಳಿಗ್ಗೆ ನಡೆಯಿತು.

ರೋಟರಿ ಕ್ಲಬ್ ಕೋಟೇಶ್ವರ, ರೋಟರಿ ಕ್ಲಬ್ ತೆಕ್ಕಟ್ಟೆ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ಕೊರ್ಗಿ ವಿಠ್ಠಲಶೆಟ್ಟಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಕುಂಭಾಶಿ, ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಮೊದಲಾದ ಸಂಸ್ಥೆಗಳು ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿದವು.




ಸುಮಾರು 25 ರಿಂದ 30 ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯಗಳನ್ನು ಸಂಗ್ರಹಿಸಿದ ಬಳಿಕ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನ ಪ್ರಮುಖರಲ್ಲಿ ಒಬ್ಬರಾದ ಗಣೇಶ್ ಪುತ್ರನ್ ಅವರು ಮಾತನಾಡಿ, ಕುಂದಾಪುರದ ತೀರ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಮೂಲಕ ಸಮುದ್ರವನ್ನು ರಕ್ಷಿಸುವ ಕಾರ್ಯಕ್ಕೆ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಹೆಜ್ಜೆ ಇಟ್ಟಿದ್ದು ಇದರ ಭಾಗವಾಗಿ ಆನೆಗುಡ್ಡೆ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸಲಾಗಿದೆ ಎಂದರು. ಅಲ್ಲದೆ ಸ್ವಚ್ಛತೆಯ ಬಳಿಕ ತ್ಯಾಜ್ಯ ಮತ್ತೆ ಮತ್ತೆ ಬೀಳುವುದನ್ನ ತಪ್ಪಿಸಲು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಸರಕಾರಗಳು ಒಗ್ಗಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದರು.


ಕೋಟೇಶ್ವರ ರೋಟರಿ ಕ್ಲಬ್ ನ ಅಧ್ಯಕ್ಷ ಸತೀಶ್ ನಾಯಕ್ ಮಾತಾಡಿ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು ಕೈಜೋಡಿಸಿದಾಗ ಯಶಸ್ಸು ಸುಲಭ ಸಾಧ್ಯ ಎಂದರು.


ತೆಕ್ಕಟ್ಟೆ ರೋಟರಿ ಕ್ಲಬ್ ನ ಅಧ್ಯಕ್ಷ ಮಾಜಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ ಶ್ರೀಯಾನ್ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ, ಕಸದ ಬುಟ್ಟಿಗಳನ್ನು (ಡಸ್ಟ್ ಬಿನ್) ಆಡಳಿತ ಮಂಡಳಿ ವ್ಯವಸ್ಥೆಗೊಳಿಸಬೇಕು ಆಗ ತ್ಯಾಜ್ಯ ವಿಲೇವಾರಿ ನಡೆಸಲು ಅನುಕೂಲವಾಗುತ್ತದೆ ಎಂದರು.

ಬಳಿಕ ಮಾತನಾಡಿದ ದೇವಸ್ಥಾನದ ಆಡಳಿತ ಧರ್ಮದರ್ಶಿ ರಮಣ ಉಪಾಧ್ಯಾಯ, ದೇವಸ್ಥಾನದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ತ್ಯಾಜ್ಯ ವಿಲೇವರಿಗೆ ದೇವಸ್ಥಾನದ ಜೊತೆ ಸಹಕರಿಸಬೇಕು ಎಂದರು.


ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಅಧ್ಯಕ್ಷೆ ಕಲ್ಪನಾ ಭಾಸ್ಕರ್, ರೆಡ್ ಕ್ರಾಸ್ ಸೊಸೈಟಿಯ ಖಜಾಂಜಿ ಶಿವರಾಮ ಶೆಟ್ಟಿ, ಕುರುಗಿ ವಿಠಲಶೆಟ್ಟಿ ಪಬ್ಲಿಕ್ ಶಾಲೆ ಕೃಷ್ಣ ಅಧ್ಯಕ್ಷ ಕೊರ್ಗಿ ವಿಠಲಶೆಟ್ಟಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸದಸ್ಯರು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.