ಸೂಚನೆ ನೀಡದೇ ಕಾರು ಬಾಗಿಲು ತೆರೆದು ಅಪಘಾತ – ಬೈಕ್ ಸವಾರ ಗಂಭೀರ
ಕುಂದಾಪುರ: ಯಾವುದೇ ಸೂಚನೆ ನೀಡದೇ ಕಾರಿನ ಡೋರ್ ತೆಗೆದ ಪರಿಣಾಮ ಕಾರು ಬಾಗಿಲಗೆ ಬೈಕ್ ಗುದ್ದಿ ಸವಾರ ಗಂಭೀರ ಗಾಯಗೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಂತಾರು ಗ್ರಾಮದ ರಥಬೀದಿಯಲ್ಲಿ ನಡೆದಿದೆ. ಐರೋಡಿ ಗ್ರಾಮದ ನಿವಾಸಿ ವಿಠಲ(45) ಗಂಭೀರ ಗಾಯಗೊಂಡವರು.

ವಿಠಲ ಅವರು ತಮ್ಮ ಮನೆಯ ಮಾವಿನ ಹಣ್ಣುಗಳನ್ನು ಪರಿಚಯದ ಬ್ರಹ್ಮಾವರ ಸತ್ಯಾನಾಥ್ ಕ್ಲಾತ್ ಸೆಂಟರ್ ಹಿಂಬದಿಯ ನಿವಾಸಿ ಪವನ್ ರವರ ಮನೆಗೆ ಬೈಕಿನಲ್ಲಿ ಕೊಂಡೊಯ್ಯುತ್ತಿದ್ದರು. ಬ್ರಹ್ಮಾವರ ತಾಲೂಕು ಚಾಂತಾರು ಗ್ರಾಮದ ರಥಬೀದಿಯಲ್ಲಿ ಹೋಗುತ್ತಿರುವಾಗ ರಮೇಶ್ ರವರ ಅಂಗಡಿ ಬಳಿ ಇಕ್ಕಟ್ಟಾದ ರಸ್ತೆಯಲ್ಲಿ ನಿಂತಿದ್ದ ಓಮ್ನಿ ಕಾರಿನ ಚಾಲಕ ಯಾವುದೇ ಸೂಚನೆ ನೀಡದೇ ಬಾಗಿಲು ತೆರೆದಿದ್ದಾನೆ. ಪರಿಣಾಮ ಬೈಕಿಗೆ ಓಮ್ನಿ ಕಾರಿನ ಬಾಗಿಲು ತಾಗಿ ಸವಾರ ವಿಠಲ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಬಲಕಾಲಿನ ತೊಡೆಯ ಬಳಿ ಮೂಳೆ ಮುರಿತದ ಪೆಟ್ಟಾಗಿದ್ದು, ಎದೆಗೆ ಗುದ್ದಿದ ಒಳನೋವಾಗಿದೆ. ತಕ್ಷಣ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.