ಕುಂದಾಪುರ: ನಿರಂತರ ಸುರಿದ ಮಳೆಗೆ ಹಲವೆಡೆ ಹಾನಿ ಲಕ್ಷಾಂತರ ರೂ. ನಷ್ಟ
ಕುಂದಾಪುರ: ಉಡುಪಿ ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿವಿಧೆಡೆ ಹಾನಿ ಉಂಟಾಗಿದ್ದು, 1,050,000 ರೂ. ನಷ್ಟ ಉಂಟಾಗಿದೆ. ರೆಡ್ ಅಲರ್ಟ್ ಮುಂದುವರಿದಿದ್ದು ಇಂದೂ ಕೂಡ ಭಾರೀ ಮಳೆಯಾಗಿದೆ.

ಬೈಂದೂರು ತಾಲೂಕಿನ ಶಿರೂರು ಗ್ರಾಮದ ಗಿರಿಜಾ ಅವರ ಮನೆಗೆ ಸಿಡಿಲು ಬಡಿದ ಪರಿಣಾಮವಾಗಿ ಮಂಗಳಾ ಅವರಿಗೆ ಗಾಯವಾಗಿದೆ. ಕುಂದಾಪುರ ಕರ್ಕುಂಜೆಯ ಅಸ್ಮಾ ಅವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದೆ. ಕುಂದಾಪುರ ಕಸಬಾದ ಸಾವಿತ್ರಿ ಅವರ ಮನೆ ಗಾಳಿ-ಮಳೆಯಿಂದ ಭಾಗಶಃ ಹಾನಿಯಾಗಿದೆ. ಕುಂದಾಪುರ ಬೀಜಾಡಿಯ ಗುಲಾಬಿ ಅವರ ಮನೆಯ ಮೇಲೆ ಮರಬಿದ್ದಿದೆ.ಬೈಂದೂರು ಯಳಜಿತ್ ಪಾರ್ವತಿ ಮರಾಠಿ ಅವರ ಮನೆಯ ಮೇಲೆ ಮರಬಿದ್ದು ಹಾನಿಯಾಗಿದೆ.

ಕಾರ್ಕಳದ ಸುಜಾತಾ ಶೆಟ್ಟಿ ಅವರ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ. ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ 173 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 2.1ಕಿ.ಮೀ.ವಿದ್ಯುತ್ ತಂತಿಗೆ ಹಾನಿ ಯಾಗಿದ್ದು, 8 ಟ್ರಾನ್ಸ್ ಫಾರ್ಮರ್ ಗಳು ಕೆಟ್ಟು ಹೋಗಿವೆ. ಮೆಸ್ಕಾಂಗೆ 42.5 ಲ.ರೂ. ನಷ್ಟ ಉಂಟಾಗಿದೆ.
ಭಾರೀ ಗಾಳಿ-ಮಳೆಗೆ ಕುಂದಾಪುರ ತಾಲೂಕಿನ 6 ಮನೆಗಳಿಗೆ ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ. ಗೋಪಾಡಿ ಗ್ರಾಮದ ಗುಲಾಬಿ ಮರಕಾಲ ಅವರ ಮನೆ, ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಅಶ್ವಿನಿ ಅವರ ಮನೆ, ಗಂಗೆ ಅವರ ಮನೆ, ಸೇನಾಪುರ ಗ್ರಾಮದ ಬೆಳ್ಳಾಡಿಯ ನಾಗವೇಣಿ ಶೆಟ್ಟಿಯವರ ಮನೆಗೆ ಮರ ಬಿದ್ದು ಹಾನಿಯಾಗಿದೆ.ಪುರಸಭೆ ವ್ಯಾಪ್ತಿಯ ಖಾರ್ವಿ ಕೆಳಾಕೇರಿಯ ಗಿರಿಜಾ ಅವರ ಮನೆ, ಸಾವಿತ್ರಿ ಖಾರ್ವಿ ಅವರ ಮನೆ ಹಂಚು ಗಾಳಿಗೆ ಹಾರಿ ಹೋಗಿದೆ.