ಬೈಂದೂರು: ಸಾಕು ನಾಯಿಯೊಂದಿಗೆ ಅಮಾನವೀಯ ವರ್ತನೆ – ಬೈಕಿಗೆ ಸಂಕೋಲೆಯಲ್ಲಿ ಕಟ್ಟಿ ಎಳೆದೊಯ್ದು ಹಿಂಸೆ


ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬೈಂದೂರು ಪೇಟೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಶನಿವಾರ ಸಂಜೆ ನಾಯಿಯೊಂದನ್ನು ಸಂಕೋಲೆಯಲ್ಲಿ ಬೈಕಿಗೆ ಕಟ್ಟಿ ಎಳೆದೊಯ್ದಿದ್ದಲ್ಲದೆ ಅಮಾನವೀಯ ರೀತಿಯಲ್ಲಿ ಹಿಂದೆ ನೀಡಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಣಿ ಹಿಂಸೆ ನಡೆಸಿದಾತನನ್ನು ಬೈಂದೂರು ಭಾಗದ ಪಡುವರಿ ನಿವಾಸಿ ಸುಬ್ಬಣ್ಣ ಸೇರೆಗಾರ್ ಎಂದು ಗುರುತಿಸಲಾಗಿದೆ.


ಸುಬ್ಬಣಿ ತನ್ನ ಸಾಕು ನಾಯಿಯನ್ನು ಸಂಕೋಲೆಯಲ್ಲಿ ಬಿಗಿದು ತನ್ನ ಬೈಕಿನ ಹಿಂಬದಿಯಲ್ಲಿ ಕಟ್ಟಿದ್ದಾನೆ. ಬಳಿಕ ಸುಮಾರು 2 ಕಿಮೀ ದೂರದವರೆಗೆ ಎಳೆದೊಯ್ಯುತ್ತಾನೆ. ಇದನ್ನು ಹಿಂದುಗಡೆಯಿಂದ ಬಂದ ವಾಹನದಲ್ಲಿದ್ದವರು ವಿಡಿಯೋ ಮಾಡಿಕೊಂಡಿದ್ದಾರೆ.


ನಾಯಿ ಬೈಕಿನ ವೇಗಕ್ಕೆ ಓಡಲು ಆರಂಭಿಸಿದೆ. ಆದರೆ ನಿರಂತರ ಓಟದಿಂದ ಸುಸ್ತಾದ ನಾಯಿ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಅಪ್ಪಳಿಸಿದೆ. ಒಂದಷ್ಟು ದೂರ ನಾಯಿಯನ್ನು ಎಳೆದೊಯ್ಯಲಾಗುತ್ತದೆ. ಬಳಿಕ ನಾಯಿ ಹಲವು ಬಾರಿ ಎದ್ದೇಳಲು ಪ್ರಯತ್ನಿಸಿ ವಿಫಲವಾಗುತ್ತದೆ. ಆದರೆ ಬೈಕ್ ಚಲಾಯಿಸುತ್ತಿದ್ದ ಸುಬ್ಬಣ್ಣಿ ಕ್ಯಾರೆ ಎನ್ನದೆ ಮುಂದಕ್ಕೆ ಸಾಗುತ್ತಾನೆ.


ಹಿಂದಿನಿಂದ ಬಂದವರು ಎಚ್ಚರಿಸಿದ ಬಳಿಕ ಆರೋಪಿ ಬೈಕ್ ನಿಲ್ಲಿಸುತ್ತಾನೆ. ಬೈಕ್ ಸವಾರ ಸುಬ್ಬಣ್ಣಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರೂ ಆತ ಮಾತ್ರ ಉದ್ದಟತನ ತೋರಿಸಿದ್ದಾನೆ. ಬಳಿಕ ಜನರ ಗುಂಪು ಹೆಚ್ಚಾದಾಗ ತೆಪ್ಪಗಾಗಿದ್ದಾನೆ. ನಾಯಿಗೆ ಗಂಭೀರ ಗಾಯಗಳಾಗಿವೆ.


ಆರೋಪಿ ಸುಬ್ಬಣ್ಣಿ ಈ ಹಿಂದೆ ನ್ಯಾಯಾಲಯದಲ್ಲಿ ಗುಮಾಸ್ತನಾಗಿ ನಿವೃತ್ತನಾಗಿದ್ದು, ಎಲ್ಲೆಡೆ ಗಲಾಟೆ, ಹೊಡೆದಾಟ ಮಾಡುವುದೇ ಕಾಯಕ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಲಾಟೆ ಇಲ್ಲದೆ ಎಲ್ಲಿಂದಲೋ ವಾಪಸು ಬರಲ್ಲ. ಮನುಷ್ಯತ್ವವೇ ಇಲ್ಲದವರಂತೆ ವರ್ತಿಸುತ್ತಾನೆ ಎನ್ನುವ ಆರೋಪ ಕೇಳಿ ಬಂದಿದೆ. ಸಂಬಂಧಪಟ್ಟವರು ತಕ್ಷಣ ಘಟನೆಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬಂದಿದೆ.