ನಿಸ್ವಾರ್ಥ ಮನೋಭಾವನೆಯಿಂದ ಸಂಘಟನೆಗಳು ಸಮಾಜ ಸೇವೆಯಲ್ಲಿ ತೊಡಗಬೇಕು – ಅಶೋಕ್ ಪೂಜಾರಿ
ಕುಂದಾಪುರ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ಲವ ಸಂಘಟನೆಗಳು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇತರ ಸಮುದಾಯಗಳಿಗೆ ಮಾದರಿಯಾಗುವಂತಹ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಅಶೋಕ್ ಪೂಜಾರಿ ಬೀಜಾಡಿ ಹೇಳಿದರು.

ಅವರು ಬಿಲ್ಲವ ಸಮಾಜ ಸೇವಾ ಸಂಘ (ರಿ) ರಿಜಿಸ್ಟರ್ ಕುಂದಾಪುರ ಇವರ ವತಿಯಿಂದ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಬಿಲ್ಲವ ಸಂಘಟನೆಗಳ ಚಿಂತನ ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಬಿಲ್ಲವ ಸಂಘಟನೆಗಳು ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ ಅವರು ಬಿಲ್ಲವ ಸಂಘಟನೆಗಳು ಸಮಾಜಕ್ಕೆ ತಿಳುವಳಿಕೆ ನೀಡುವ ಜವಾಬ್ದಾರಿಯನ್ನ ಅತ್ಯಂತ ನಿಸ್ವಾರ್ಥ ಮನೋಭಾವನೆಯಿಂದ ಕೈಗೊಂಡು ಬಿಲ್ಲವ ಸಮುದಾಯದ ಬೆಳವಣಿಗೆಗೆ ಪ್ರಯತ್ನಿಸಬೇಕು ಎಂದರು.
ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ. ಪ್ರೇಮಾನಂದ ಮಾತನಾಡಿ, ಸಮುದಾಯದಲ್ಲಿ ಆರೋಗ್ಯದ ಕಾಳಜಿಯನ್ನು ಮೂಡಿಸಬೇಕು. ಜನತೆಗೆ ಆರೋಗ್ಯದ ಅರಿವು ನೀಡುವ ಕೆಲಸಗಳನ್ನು ಹಮ್ಮಿಕೊಳ್ಳಬೇಕು. ಸಂಘಟನೆಗಳು ಗ್ರಾಮೀಣ ಪ್ರದೇಶದಲ್ಲಿ, ಜನರಲ್ಲಿ ಆರೋಗ್ಯದ ಬಗೆಗೆ ಕಾಳಜಿಯನ್ನ ಮೂಡಿಸುವ ಕೆಲಸವನ್ನು ಮಾಡಬೇಕು ಎಂದರು.
ಬಿಲ್ಲವ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ಮಾಣಿಗೋಪಾಲ್, ಬಿಲ್ಲವ ಸಂಘದ ಉಪಾಧ್ಯಕ್ಷರುಗಳಾದ ಮುಲ್ಲಿ ರಾಮ ಪೂಜಾರಿ ಹಾಗೂ ಶಿವರಾಮ ಪೂಜಾರಿ, ಬೈಂದೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಸಂಘದ ಕಾರ್ಯದರ್ಶಿ ಯೋಗೀಶ್ ಪೂಜಾರಿ ಕೋಡಿ, ಯುವಕ ಮಂಡಲದ ಅಧ್ಯಕ್ಷ ಸಂದೇಶ ಪೂಜಾರಿ , ಕೋಶಾಧಿಕಾರಿ ವಿನಯ್ ಪೂಜಾರಿ ಬನ್ನಾಡಿ ಉಪಸ್ಥಿತರಿದ್ದರು.
ಚಿಂತನ ಮಂಥನದಲ್ಲಿ ಕುಂದಾಪುರ ಮತ್ತು ಬೈಂದೂರು ವಿಧಾನ ಸಭಾ ವ್ಯಾಪ್ತಿಗೆ ಒಳಪಡುವ 60 ವಿವಿಧ ಬಿಲ್ಲವ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಂಘಟನಾ ಚಾತುರ್ಯದಿಂದ ಸಂಘಟನೆಗಳನ್ನು ಬಲಪಡಿಸಿ ಜನಸಾಮಾನ್ಯರಿಗೆ ಅತ್ಯಗತ್ಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಂಘಟನೆಗಳು ಜನರ ಬಳಿಗೆ ತೆರಳಬೇಕು ಮತ್ತು ಅವರ ಸಮಸ್ಯೆಗಳಿಗೆ ಉತ್ತರ ನೀಡಬೇಕು ಎನ್ನುವ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ಗುಲಾಬಿ ಜಯಸೂರ್ಯ ಪೂಜಾರಿ ಪ್ರಾರ್ಥಿಸಿ, ಕಾರ್ಯದರ್ಶಿ ಯೋಗೀಶ್ ಪೂಜಾರಿ ಕೋಡಿ ಸ್ವಾಗತಿಸಿದರು. ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ನಿರೂಪಿಸಿದರು. ಮಾಡಿದರು. ಬಿಲ್ಲವ ಸೇವಾ ಸಂಘ(ರಿ)ಕುಂದಾಪುರ ಕಾರ್ಯಕ್ರಮ ಸಂಯೋಜಿಸಿತ್ತು.