ಸಾಸ್ತಾನ: ಔಷಧಿಗೆಂದು ಬಂದ ಯುವತಿಯೊಂದಿಗೆ ಅನುಚಿತ ವರ್ತನೆ – ವೃದ್ಧ ವೈದ್ಯ ಅಂದರ್
ಕುಂದಾಪುರ: ಆರೋಗ್ಯ ತಪಾಸಣೆಗೆಂದು ಬಂದಿದ್ದ ಯುವತಿಯೊಬ್ಬಳ ಜೊತೆಗೆ ವೈದ್ಯರೊಬ್ಬರು ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಯುವತಿ ಆರೋಪಿಸಿದ ಪರಿಣಾಮ ವೈದ್ಯ ಧರ್ಮದೇಟು ತಿಂದು ಜೈಲು ಸೇರಿದ ಘಟನೆ ಬ್ರಹ್ಮಾವರದ ಸಾಸ್ತಾನದಲ್ಲಿ ನಡೆದಿದೆ.

ಬ್ರಹ್ಮಾವರ ಸಮೀಪದ ಸಾಸ್ಥಾನ ಟೋಲ್ಗೇಟ್ ಸಮೀಪ ಡಾ. ರಾಘವೇಂದ್ರ ಉಪಾದ್ಯಾಯ (62) ಎಂಬುವರು ಸುಮಾರು 40 ವರ್ಷಗಳಿಂದ ಉಪಾದ್ಯಾಯ ಕ್ಲಿನಿಕ್ ಎಂಬ ಹೆಸರಿನ ಕ್ಲಿನಿಕ್ ನಡೆಸುತ್ತಿದ್ದರು. ಒಂದು ಕಾಲದಲ್ಲಿ ಉತ್ತಮ ಕ್ಲಿನಿಕ್ ಎನ್ನುವ ಹೆಸರು ಈ ಕ್ಲಿನಿಕ್ ಗೆ ಇತ್ತು. ಆದರೆ ಗುರುವಾರ ಸಾಸ್ತಾನದ ಸ್ಥಳೀಯ ನಿವಾಸಿ, ಸದ್ಯ ಮುಂಬೈಯಲ್ಲಿ ವಾಸವಿರುವ ಸುಮಾರು 20 ವರ್ಷ ಪ್ರಾಯದ ಯುವತಿಯೊಬ್ಬಳು ಆರೋಗ್ಯ ತಪಾಸಣೆಗೆಂದು ಸಾಸ್ತಾನದಲ್ಲಿರುವ ಈ ಉಪಾಧ್ಯಾಯ ಕ್ಲಿನಿಕ್ ಗೆ ಹೋಗಿದ್ದಾರೆ.
ಆಗ ವೈದ್ಯ ರಾಘವೇಂದ್ರ ಉಪಾಧ್ಯಾಯ ಯುವತಿಯೊಡನೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಯುವತಿ ಮನೆಗೆ ಹೋಗಿ ವಿಷಯ ತಿಳಿಸಿದ್ದು, ಸ್ಥಳೀಯರೆಲ್ಲ ಸೇರಿ ಸಂಜೆ ಡಾಕ್ಟರ್ ಬರುವ ವೇಳೆಗೆ ಕಾದು ಡಾಕ್ಟರ್ ರಾಘವೇಂದ್ರ ಉಪಾಧ್ಯಾಯ ಅವರನ್ನು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಬಳಿಕ ಕೋಟ ಪೊಲೀಸರು ಸ್ಥಳಕ್ಕಾಗಮಿಸಿ, ವೈದ್ಯನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.