ಮದುಮಗಳನ್ನು ತವರುಮನೆಗೆ ಕರೆತರುತ್ತಿದ್ದ ವೇಳೆ ದಿಬ್ಬಣದ ಬಸ್ ಮರಕ್ಕೆ ಡಿಕ್ಕಿ – ಹಲವರಿಗೆ ಗಾಯ

ಕುಂದಾಪುರ: ವರನ ಮನೆಯಿಂದ ಮದುಮಗಳನ್ನು ತವರು ಮನೆಗೆ ಕರೆತರುತ್ತಿದ್ದ ವೇಳೆ ದಿಬ್ಬಣದ ಮಿನಿಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡ ಘಟನೆ ಬೆಳ್ವೆ ಗ್ರಾಮದ ಅಲ್ಪಾಡಿಯ ಬರಿಗದ್ದೆ ನೀರು ಟ್ಯಾಂಕ್ ಬಳಿಯ ಇಳಿಜಾರು ರಸ್ತೆಯಲ್ಲಿ ಸಂಭವಿಸಿದೆ.
ಚಿಕ್ಕಬಳ್ಳಾಪುರದ ಗಂಡಿನ ಮನೆಯಿಂದ ಮದುಮಗಳನ್ನು ಕರೆದುಕೊಂಡು ಬರಲು ತ್ರಾಸಿಯ ಹೆಣ್ಣಿನ ಮನೆಯವರು ಹೋಗಿದ್ದು, ಅಲ್ಲಿ ಕಾರ್ಯಕ್ರಮ ಮುಗಿಸಿ ಆಗುಂಬೆ ಮಾರ್ಗವಾಗಿ ತ್ರಾಸಿಗೆ ಮಿನಿ ಬಸ್ನಲ್ಲಿ ವಾಪಾಸ್ಸು ಹೊರಟಿದ್ದರು. ದಾರಿ ಮಧ್ಯೆ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದಾಗ ಮಿನಿ ಬಸ್ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದವರಿಗೆ ಗಾಯಗಳಾಗಿವೆ.
ತೀವ್ರವಾಗಿ ಗಾಯಗೊಂಡ ಶಿವಾನಂದ, ಪಷ್ಪಾ, ಕಾವೇರಿ, ಮಂಜು, ಶಾಂತ ಹಾಗೂ ನಿಶಾಂತ್ ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದವರು ಹೆಬ್ರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೊರ ರೋಗಿಯಾಗಿ ಬಿಡುಗಡೆಗೊಂಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.