ಕುಂದಾಪುರ: ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೊಲ್ಲೂರಿಗೆ ಭೇಟಿ
ಕೊಲ್ಲೂರು ಸಮಗ್ರ ಅಭಿವೃದ್ಧಿಗೆ ಸಂಕಲ್ಪ

ಕುಂದಾಪುರ: ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರವನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎನ್ನುವ ಕುರಿತು ಸ್ಥಳೀಯ ಸಂಸದರು, ಶಾಸಕರು ಹಾಗೂ ದೇಗುಲದವರ ಅಭಿಪ್ರಾಯ ಪಡೆದುಕೊಂಡು ಕೇಂದ್ರ ಸರ್ಕಾರ ಸ್ಪಂದಿಸಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು. ಗುರುವಾರ ಸಂಜೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ದೇಗುಲದ ಕಚೇರಿಯಲ್ಲಿ ನಡೆದ ಕೊಲ್ಲೂರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳ ಕುರಿತ ಅಭಿವೃದ್ಧಿ ಯೋಜನೆ ‘ಕೊಲ್ಲೂರು ರಿಜನಲ್ ಸರ್ಕ್ಯೂಟ್” ಯೋಜನೆಯ ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿದ ಬಳಿಕ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.



ಸಭೆಯಲ್ಲಿ ಯೋಜನೆ ಕುರಿತು ಪಿಪಿಟಿ ಪ್ರದರ್ಶನ ಮಾಡಿ ಮಾತನಾಡಿದ ಬೆಂಗಳೂರಿನ ಖಾಸಗಿ ವಿನ್ಯಾಸ ಸಂಸ್ಥೆಯ ಸೌಮ್ಯ ಅವರು, 38 ಹಂತಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಸಾಂಸ್ಕೃತಿಕ, ಪರಂಪರೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಿದೆ. ಇಕೋ ಪ್ರವಾಸೋದ್ಯಮ, ಹೋಟೆಲ್, ಸ್ನಾನಘಟ್ಟ, ಇತಿಹಾಸಗಳಿಗೆ ಬೆಳಕು ಚೆಲ್ಲುವ, ಪಾರಂಪರಿಕ ಮಾದರಿಯ ಕಟ್ಟಡ ವಿನ್ಯಾಸಗೊಳಿಸುವುದು ಸೇರಿದಂತೆ ಆಧುನಿಕತೆಯ ಸ್ಪರ್ಶದಲ್ಲಿ ಯೋಜನೆ ರೂಪಿಸಲಾಗಿದೆ ಎಂದರು. ಪ್ರಥಮ ಹಂತದಲ್ಲಿ ಕೊಲ್ಲೂರು ಮೂಲಸೌಕರ್ಯ ಅಭಿವೃದ್ಧಿಗೆ ರೂ. 26.5 ಕೋಟಿ, ಬೈಂದೂರು ಸೋಮೇಶ್ವರ ಕಿನಾರೆಯ ಪಾದಚಾರಿ ಮಾರ್ಗ, ಬೀಚ್ ರೆಸ್ಟೋರೆಂಟ್ ಸೇರಿದಂತೆ ಬೀಚ್ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಅಂದಾಜು ರೂ. 100 ಕೋಟಿಯ ಯೋಜನೆ ಹಾಗೂ ಮರವಂತೆ ಕಿನಾರೆಯಲ್ಲಿ ಸೈಡೆಕ್ ರೆಸ್ಟೋರೆಂಟ್ ನಿರ್ಮಾಣ ಸೇರಿದಂತೆ ರೂ. 40 ಕೋಟಿಯ ಯೋಜನೆ ಪ್ರಸ್ತಾಪ ಮಾಡಲಾಗಿದ್ದು, ಒಟ್ಟು ರೂ. 290 ಕೋಟಿ ಯೋಜನೆಯ ಪ್ರಸ್ತಾಪ ಇರುವುದಾಗಿ ತಿಳಿಸಿದರು.



ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಗುರುರಾಜ್ ಗಂಟಿಹೊಳೆ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಪ್ರವಾಸೋದ್ಯಮ ಆಯುಕ್ತ ಕೆ.ವಿ.ರಾಜೇಂದ್ರ, ಸಚಿವರ ಅಪ್ತ ಸಹಾಯಕ ಅವಿನಾಶ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಅಲೂರು, ಸುರೇಂದ್ರ ಶೆಟ್ಟಿ ಸಹನಾ, ಪ್ರಮುಖರಾದ ಕೃಷ್ಣಪ್ರಸಾದ್ ಅಡ್ಕಂತಾಯ, ವೆಂಕಟೇಶ್ ಕಿಣಿ, ದೀಪಕ್ ಕುಮಾರ್ ಶೆಟ್ಟಿ, ಬಿ.ಎಸ್.ಸುರೇಶ್ ಶೆಟ್ಟಿ, ಪ್ರಿಯದರ್ಶಿನಿ ಬೆನ್ನೂರ್, ಶರತ್ಕುಮಾರ್ ಶೆಟ್ಟಿ ಉಪ್ಪುಂದ, ಸುರೇಶ್ ಬಟವಾಡಿ, ಡಾ.ಅತುಲ್ಕುಮಾರ ಶೆಟ್ಟಿ, ಶಿವರಾಮಕೃಷ್ಣ ಭಟ್, ಪುಷ್ಪರಾಜ್ ಶೆಟ್ಟಿ ಶಿರೂರು ಇದ್ದರು.