ಅದ್ವೈತ ತತ್ವ ಅರಿತವ ಜಗತ್ತಿಗೆ ಗುರುವಾಗುತ್ತಾನೆ – ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ

ಕುಂದಾಪುರ: ಸರಿಯಾದ ಕಾಲದಲ್ಲಿ ಗೀತೆಯ ಅಧ್ಯಯನ ಮಾಡುವುದರಿಂದ ಉತ್ತಮ ಸಂಸ್ಕಾರ ಪ್ರಾಪ್ತಿಯಾಗುತ್ತದೆ. ಅದ್ವೈತ ತತ್ವವನ್ನೂ ಅರಿತಾಗ ಜಗತ್ತಿಗೆ ಗುರುವಾಗಲು ಸಾಧ್ಯ. ಅದಕ್ಕಾಗಿಯೇ ಗೀತೆಯ ಮೂಲಕ ಶ್ರೀ ಕೃಷ್ಣ ಪರಮಾತ್ಮನನ್ನು ಜಗದ್ಗುರು ಎಂದು ಕರೆಯಲಾಗುತ್ತದೆ ಎಂದು ಶ್ರೀ ಶೃಂಗೇರಿ ಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಹೇಳಿದರು. ಅವರು ಗುರುವಾರ ಕರ್ಕುಂಜೆ ಗ್ರಾಮದ ನೆಂಪುವಿನಲ್ಲಿ ಶ್ರೀ ಕೃಷ್ಣ ದೇವರ ನೂತನ ಶಿಲಾಮಯ ಗುಡಿಯನ್ನು ಲೋಕಾರ್ಪಣೆಗೊಳಿಸಿ, ಶ್ರೀ ದೇವರಿಗೆ ಅಷ್ಟಬಂಧ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕವನ್ನು ನೆರವೇರಿಸಿ ಆಶೀರ್ವಚನ ನೀಡಿದರು.


ಜೀವನ ಹಾಗೂ ಸನ್ಮಾರ್ಗಕ್ಕೆ ಗೀತೆಯ ಅಧ್ಯಯನ ಅವಶ್ಯಕ ಎಂದ ಅವರು, ಗ್ರಂಥಗಳ ಅಧ್ಯಯನದಿಂದ ಶ್ರೇಯಸ್ಸು, ಧೃಢ ವ್ಯಕ್ತಿತ್ವ, ಧೈರ್ಯ, ಸಾಮರ್ಥ್ಯ ಪ್ರಾಪ್ತಿಯಾಗುತ್ತದೆ ಎಂದು ಶ್ರೀಗಳು ಆಶೀರ್ವದಿಸಿದರು. ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಉದ್ಯಮಿ ಕೃಷ್ಣಮೂರ್ತಿ ಮಂಜರು, ಸಂಚಾರ ಆಯುಕ್ತ ಮಲ್ಲಿಕಾರ್ಜುನ, ಉದ್ಯಮಿಗಳಾದ ವಿಜಯ ಕುಮಾರ್ ರೆಡ್ಡಿ, ಪ್ರಸಾದ್ ಕೊಂಡಯ್ಯ, ಮಂತ್ರಾಲಯದ ಶ್ರೀನಿವಾಸ ರಾವ್, ಎಸೆಸೆಲ್ಸಿಯಲ್ಲಿ ರಾಜ್ಯ ಮಟ್ಟದ ರ್ಯಾಂಕ್ ಗಳಿಸಿದ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಶ್ರೀಗಳು ಗೌರವಿಸಿದರು.


ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಅರ್ಚಕ ವೃಂದ, ವಿವಿಧ ಕ್ಷೇತ್ರಗಳ ಗಣ್ಯರು, ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡ್ದಿರು. ಬೈಂದೂರಿನ ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಜ್ಯೋತಿಷಿ ವಿದ್ವಾನ್ ಟಿ. ವಾಸುದೇವ ಜೋಯಿಸ್ ನಿರೂಪಿಸಿ, ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ ವಂದಿಸಿದರು.