ಬೈಂದೂರು: ಸಮೃದ್ಧ ಬೈಂದೂರು ಕಲ್ಪನೆಯಡಿ ಸ್ಪೈನಲ್ ಕಾಡ್ ಪೀಡಿತರಿಗೆ ಸೇವಾಧಾಮ ವರದಾನ – ಶಾಸಕ ಗಂಟಿಹೊಳೆ
ಕುಂದಾಪುರ: ಸಮೃದ್ಧ ಬೈಂದೂರು ಪರಿಕಲ್ಪನೆಯ ಸೇವಾ ಸೇತು ಯೋಜನೆಯಡಿಯಲ್ಲಿ ಸೇವಾ ಭಾರತಿ (ರಿ.)ಕನ್ಯಾಡಿ ಇವರ ಸಹಯೋಗದೊಂದಿಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಅನುಕೂಲ ಕಲ್ಪಿಸುವ ಉದ್ಧೇಶದಿಂದ ಬೈಂದೂರಿನ ಪಡುವರಿ ಗ್ರಾಮದ ಹೇನಬೇರ್ ಎಂಬಲ್ಲಿ ನೂತನ ಪುನಶ್ಚೇತನ ಕೇಂದ್ರ ಸೇವಾಧಾಮ ನಿರ್ಮಾಣಗೊಳ್ಳಲಿದ್ದು, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗಂಟಿಹೊಳೆ, ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಬೈಂದೂರಿನಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರಿಗೆ ನೂತನ ಪುನಶ್ಚೇತನ ಕೇಂದ್ರ ಕಾರ್ಯ ಆರಂಭಗೊಳ್ಳಲಿದ್ದು, ಸಹೃದಯಿ ದಾನಿಗಳ ನೆರವಿನಿಂದ ಆದಷ್ಟು ಶೀಘ್ರ ಉದ್ಘಾಟನೆಯಾಗಲಿ ಎಂದರು. ಸೇವಾ ಭಾರತಿ (ರಿ.) ಕನ್ಯಾಡಿ ಇದರ ಸಂಸ್ಥಾಪಕ ವಿನಾಯಕ ರಾವ್ ಕನ್ಯಾಡಿ ತಮ್ಮ ಪ್ರಾಸ್ತಾವಿಸಿದರು.
ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ಡಾ.ಕೆ.ಪಿ. ನಂಬಿಯಾರ್, ಹಿರಿಯ ವೈದ್ಯ ಶಿರೂರು, ಡಾ.ಎ. ಎಸ್. ಉಡುಪ, ಉಪಾಧ್ಯಕ್ಷ ಆರೋಗ್ಯ ಭಾರತಿ, ಬಾಲಕೃಷ್ಣ, ಕಾರ್ಯದರ್ಶಿ, ಸೇವಾ ಭಾರತಿ (ರಿ.) ಕನ್ಯಾಡಿ ಉಪಸ್ಥಿತರಿದ್ದರು. ಬೈಂದೂರು ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಗಜೇಂದ್ರ ಬೇಲೆಮನೆ ಸ್ವಾಗತಿಸಿದರು. ಪಿ.ಸುಧಾಕರ್ ನಿರೂಪಿಸಿದರು.