ಕಾರವಾರ ಜೈಲಿನಿಂದ ಹರೀಶ್ ರೆಡ್ಡಿ ಕರೆ ಮಾಡಿ ಬೆದರಿಕೆ : ದೂರು ದಾಖಲು

ಕುಂದಾಪುರ: ಬ್ರಹ್ಮಾವರದಲ್ಲಿ ಮರಳುಗಾರಿಕೆ ನಡೆಸುತ್ತಿರುವ ಅರ್ಜುನ್ ನಾಯರಿ, ನಿತಿನ್ ರೈ, ಜೋಸೆಫ್ ರವರಿಗೆ ತೊಂದರೆ ಕೊಟ್ಟರೆ ಸುಮ್ಮನೇ ಬಿಡುವುದಿಲ್ಲ ಎಂದು ಕಾರವಾರ ಜೈಲಿನಿಲ್ಲಿರುವ ಹರೀಶ್ ರೆಡ್ಡಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಬ್ರಹ್ಮಾವರದ ಹೊಸಾಳ ಗ್ರಾಮದ ಪ್ರವೀಣ್ ಎಂಬುವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಪೆಬ್ರುವರಿ ತಿಂಗಳಲ್ಲಿ ರಾತ್ರಿ ಕರೆ ಮಾಡಿದ್ದ ಹರೀಶ್ ರೆಡ್ಡಿ, ತಾನು ಕಾರವಾರ ಜೈಲಿನಿಂದ ಕರೆ ಮಾಡುತ್ತಿರುವುದಾಗಿಯೂ ಹೇಳಿದ್ದ. ನೀನು ಅರ್ಜುನ್ ನಾಯರಿ, ನಿತಿನ್ ರೈ, ಜೋಸೆಫ್ ರವರಿಗೆ ಮರಳುಗಾರಿಕೆ ಮತ್ತು ಮರಳು ಯಾರ್ಡ್ ಮಾಡುವಲ್ಲಿ ಸುಖಾ ಸುಮ್ಮನೆ ತೊಂದರೆ ನೀಡಿದಲ್ಲಿ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಬಳಿಕ ಎಪ್ರಿಲ್ 2ರಂದು ರಾತ್ರಿ 8 ಗಂಟೆಗೆ ಕರೆ ಮಾಡಿದ್ದ ಹರೀಶ್ ರೆಡ್ಡಿ, ಮತ್ತೆ 8.22ಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹರೀಶ್ ರೆಡ್ಡಿ ಕರೆಗೆ ಪ್ರತಿಕ್ರಿಯಿಸಿದ್ದ ಪ್ರವೀಣ್, ನೀವು ನನಗೆ ಪದೇಪದೇ ಕಾಲ್ ಮಾಡಬೇಡಿ. ಮೊನ್ನೆ ಬಂಡಿಮಠದ ನೀರಿನ ಗಲಾಟೆ ಪ್ರಕರಣ ನಡೆದ ಮೇಲೆ ಎಲ್ಲರ ಕರೆಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದ ಕೂಡಲೇ, ಹರೀಶ್ ರೆಡ್ಡಿಯವರು ಹಾಗಿದ್ದರೆ ನಾವೆಲ್ಲ ಜೈಲಿನಿಂದ ನಿಮಗೆಲ್ಲ ಕರೆ ಮಾಡಿದರೆ ನಾವು ತೊಂದರೆಗೆ ಒಳಗಾಗುತ್ತೇವೆ ಎಂದು ಹೇಳಿ ಕರೆಯನ್ನು ಡಿಸ್ ಕನೆಕ್ಟ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ನಾಯರಿ ನಿತಿನ್ ರೈ ಮತ್ತು ಜೋಸೆಫ್ ರವರು ಹಲವಾರು ವ್ಯಕ್ತಿಗಳಿಂದ ಕರೆ ಮಾಡಿಸಿ ಜೀವ ಬೆದರಿಕೆ ಹಾಕಿಸಿದ್ದಾಋಎ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.