ಬಿದ್ಕಲ್ಕಟ್ಟೆ: ಏಪ್ರಿಲ್ 26, 27ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಯುವ ಬಾಂಧವ್ಯ-2025

ಕುಂದಾಪುರ: ಏಪ್ರಿಲ್ 26 ಮತ್ತು 27ರಂದು ಕುಂದಾಪುರದ ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ, ಉಡುಪಿ ಜಿಲ್ಲಾ ಯುವ ವಿಪ್ರ ವೇದಿಕೆ ವತಿಯಿಂದ ಯುವ ಬಾಂಧವ್ಯ-2025 ನಡೆಯಲಿದೆ ಎಂದು ಯುವ ವಿಪ್ರ ವೇದಿಕೆ ಅಧ್ಯಕ್ಷೆ ಪವಿತ್ರ ಅಡಿಗ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 26 ಶನಿವಾರ ಬೆಳಿಗ್ಗೆ 9 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬಳಿಕ ವಿಪ್ರ ಸರಿಗಮಪ ಇದರ ಫೈನಲ್ ಸ್ಪರ್ಧೆ ನಡೆಯಲಿದೆ. ಜಾನಪದ ನೃತ್ಯ ಸ್ಪರ್ಧೆ, ಫ್ಯಾಶನ್ ಶೋ, ಛದ್ಮವೇಷ ಸ್ಪರ್ಧೆ ನಡೆಯಲಿದೆ ಎಂದರು.
ಏಪ್ರಿಲ್ 27 ರಂದು ರವಿವಾರ ಬೆಳಿಗ್ಗೆ 8 ಗಂಟೆಗೆ ಪಥ ಸಂಚಲನ ನಡೆಯಲಿದೆ. ಬಳಿಕ ವೈಯಕ್ತಿಕ ಆಟಗಳು, ಹಗ್ಗ ಜಗ್ಗಾಟ, ಆಶು ಕವನ ರಚನೆ, ರಸಪ್ರಶ್ನೆ, ಚಿತ್ರಕಲೆ ಮೊದಲಾದ ಸ್ಪರ್ಧೆಗಳು ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಪುರುಷರಿಗಾಗಿ ಕ್ರಿಕೆಟ್, ವಾಲಿಬಾಲ್, ಯುವತಿಯರಿಗಾಗಿ ಕ್ರಿಕೆಟ್, ತ್ರೋ ಬಾಲ್ ಸ್ಪರ್ಧೆಗಳು ನಡೆಯಲಿವೆ ಎಂದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಅಧ್ಯಕ್ಷರಾದ ಎಸ್.ಕೃಷ್ಣಾನಂದ ಚಾತ್ರ,ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಪ್ರಧಾನ ಕಾರ್ಯದರ್ಶಿ ಗಣೇಶ ರಾವ್ ಉಪಸ್ಥಿತರಿದ್ದರು.