ಕುಂದಾಪುರ: ವೈಶ್ಯವಾಣಿ ಸಮಾಜವನ್ನು ಪ್ರವರ್ಗ 2ಡಿ ಅಡಿಯಲ್ಲಿ ಸರ್ಕಾರೀ ದಾಖಲೆಗಳಲ್ಲಿ ಸೇರಿಸುವಂತೆ ಆಗ್ರಹ

ಕುಂದಾಪುರ: ಇದುವರೆಗೂ ಸರ್ಕಾರಿ ದಾಖಲೆಗಳಲ್ಲಿ ಗುರುತಿಸಲ್ಪಡದ ರಾಜ್ಯದಲ್ಲಿ ಸುಮಾರು ಐದು ಲಕ್ಷದಷ್ಟು ಮತ್ತು ಉಡುಪಿ ಜಿಲ್ಲೆಯಲ್ಲಿ ಜನಸಂಖ್ಯೆ ಹೊಂದಿರುವ ಸುಮಾರು 25 ಸಾವಿರ ವೈಶ್ಯವಾಣಿ ಸಮಾಜವನ್ನು ಪ್ರವರ್ಗ 2ಡಿ ಕೆಟಗರಿಯಲ್ಲಿ ದಾಖಲು ಮಾಡುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ನಿರ್ಣಯಗಳನ್ನು ಗಜೇಟ್ ನೋಟಿಫಿಕೇಶನ್ ಮಾಡುವಂತೆ ವೈಶ್ಯವಾಣಿ ಸಮಾಜದ ಅಧ್ಯಕ್ಷ ವೆಂಕಟೇಶ್ ನಾಯಕ್ ಕುಂದಾಪುರ ಹಾಗೂ ಸಾಮಾಜಿಕ ಕಾರ್ಯಕರ್ತ ಸುಭಾಷ್ ಶೇಟ್ ಆಗ್ರಹಿಸಿದ್ದಾರೆ.



ಈ ಬಗ್ಗೆ ಹಲವು ದಶಕಗಳಿಂದ ಹೋರಾಟ ನಡೆಸುತ್ತಿರುವ ವೈಶ್ಯವಾಣಿ ಸಮಾಜದ ಸಾಮಾಜಿಕ ಕಾರ್ಯಕರ್ತ ಸುಭಾಷ್ ಶೇಟ್ ಪ್ರತಿಕ್ರಿಯಿಸಿ, ನಮ್ಮ ವೈಶ್ಯವಾಣಿ ಸಮಾಜದ ಮಕ್ಕಳಿಗೆ ಶೈಕ್ಷಣಿಕವಾಗಿ, ಮುಂದುವರಿಯಲು ಜಾತಿಯ ಅವಶ್ಯಕತೆ ಇದ್ದು, ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ವೈಶ್ಯವಾಣಿ ಸಮಾಜವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತುಂಬಾ ಹಿಂದುಳಿದಿದೆ. ಈ ತನಕ ಸರಕಾರದ ದಾಖಲೆಗಳಲ್ಲಿ ವೈಶ್ಯವಾಣಿ ಜಾತಿ ನಮೂದಿಸಿಲ್ಲ. ತಕ್ಷಣ ಸರ್ಕಾರ ಹಾಗೂ ವಿರೋಧ ಪಕ್ಷಗಳು ತಾರತಮ್ಯ ತೋರದೆ ಹಿಂದಿನ ಜಾತಿಗಣತಿ ಆಯೋಗ ನೀಡಿದ ಶಿಫಾರಸ್ಸನ್ನು ಊರ್ಜಿತಗೊಳಿಸಿ ಪ್ರವರ್ಗ 2ಡಿ ಅಡಿಯಲ್ಲಿ ಪರಿಗಣಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.



ಈ ಹಿಂದೆ ಶಂಕ್ರಪ್ಪ ನೇತೃತ್ವದ ಜಾತಿ ಗಣತಿ ವರದಿ ಆಯೋಗವು ವೈಶ್ಯವಾಣಿ ಸಮಾಜವನ್ನು ಪ್ರವರ್ಗ 3 ಬಿ ಅಡಿಯಲ್ಲಿ ಸೇರ್ಪಡೆಗೊಳಿಸಲು ಸಲಹೆ ನೀಡಿತ್ತು. ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತನ್ನ ಆದೇಶ ಸಂಖ್ಯೆ: ಹಿಂವಕ/134/BCA 2023, Date 27/03/2023ರಲ್ಲಿ ಪ್ರವರ್ಗ 2ಡಿ ಅಡಿಯಲ್ಲಿ ದಾಖಲಿಸಿ ಆದೇಶಿಸಿತ್ತು. ಆದರೆ ಬಳಿಕ ಗಜೆಟ್ ನೋಟಿಫಿಕೇಶನ್ ನೆನೆಗುದಿಗೆ ಬಿದ್ದ ಪರಿಣಾಮ ಸರ್ಕಾರಿ ದಾಖಲೆಗಳಿಗೆ ವೈಶ್ಯವಾನಿ ಸಮಾಜ ಸಾಮಾನ್ಯ ಕೆಟಗರಿಯಲ್ಲಿಯೇ ಮುಂದುವರೆದಿತ್ತು.