ಕಾಶ್ಮೀರ: ಪಹಲ್ಗಾಮ್ ಭಯೋತ್ಪಾದಕ ದಾಳಿ: ನಂಬರ್ ಪ್ಲೇಟ್ ಇಲ್ಲದ ಕಪ್ಪು ಬೈಕ್ ಸೇನೆ ವಶಕ್ಕೆ!

ಕಾಶ್ಮೀರ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿರುವ ಬೈಸರನ್ನಲ್ಲಿ ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೂಲಕ ಮಾತ್ರ ಪ್ರವೇಶಿಸಬಹುದಾದ ಹುಲ್ಲುಗಾವಲು ಪ್ರದೇಶದಲ್ಲಿ 26 ಜನ ಪ್ರವಾಸಿಗರನ್ನು ಬಲಿ ಪಡೆದುಕೊಂಡಿರುವ ವಿನಾಶಕಾರಿ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಾಳಿ ನಡೆದ ಸ್ಥಳದ ಬಳಿ ಭಯೋತ್ಪಾದಕರು ಬಳಸಿರಬಹುದು ಎಂದು ಎನ್ನಲಾದ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬೈಕೊಂದನ್ನು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ಗುಪ್ತಚರ ಮಾಹಿತಿಯ ಪ್ರಕಾರ, ಭಯೋತ್ಪಾದಕರು ಸುರಕ್ಷಿತವಾದ ಸ್ಥಳವನ್ನು ತಲುಪಲು ಮತ್ತು ಭಯೋತ್ಪಾದಕ ದಾಳಿ ನಡೆಸಿದ ನಂತರ ತಪ್ಪಿಸಿಕೊಳ್ಳಲು ವಾಹನಗಳ ವ್ಯವಸ್ಥೆಯನ್ನು ಮೊದಲೇ ಸಿದ್ಧತೆ ಮಾಡಿಕೊಂಡಿದ್ದರು ಎಂದು ನಂಬಲಾಗಿದೆ. ಪೊಲೀಸರು ವಶಪಡಿಸಿಕೊಂಡಿರುವ ಬೈಕ್ ಅನ್ನು ಪ್ರಸ್ತುತ ಬೆರಳಚ್ಚುಗಳು, ಡಿಎನ್ಎ ಮಾದರಿಗಳು ಮತ್ತು ಸಂಭವನೀಯ ಸ್ಫೋಟಕ ಅವಶೇಷಗಳು ಸೇರಿದಂತೆ ವಿಧಿವಿಜ್ಞಾನ ಪುರಾವೆಗಳಿಗಾಗಿ ಪರಿಶೀಲಿಸಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಪ್ರಸಿದ್ಧ ಪ್ರತಿನಿಧಿ ಮತ್ತು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತವಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಭಯೋತ್ಪಾದಕರ ದಾಳಿಯಲ್ಲಿ ಯುಎಇ ದೇಶದ ಇಬ್ಬರು, ನೇಪಾಳದ ಇಬ್ಬರು, ಕರ್ನಾಟಕದ ಇಬ್ಬರು ಹಾಗೂ ಸ್ಥಳೀಯರು ಇಬ್ಬರು ಸೇರಿದಂತೆ 26 ಮಂದಿ ಸಾವನ್ನಪ್ಪಿದ್ದು, ಹಲವಾರುಮಂದಿ ಗಂಭಿರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದುರ್ಘಟನೆಯ ಬಳಿಕ ಪ್ರವಾಸಿಗರು ಸುರಕ್ಷಿತವಾಗಿ ಮರಳಲು ಸಹಾಯ ಮಾಡಲು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಶ್ರೀನಗರದಿಂದ ಎರಡು ಹೆಚ್ಚುವರಿ ವಿಮಾನಗಳನ್ನು ಘೋಷಿಸಿವೆ. ಏಪ್ರಿಲ್ 30 ರವರೆಗೆ ಶ್ರೀನಗರಕ್ಕೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳಲ್ಲಿ ವಿಮಾನಯಾನ ಸಂಸ್ಥೆಗಳು ಉಚಿತ ಮರುಹಂಚಿಕೆ ಮತ್ತು ಪೂರ್ಣ ಮರುಪಾವತಿಯನ್ನು ನೀಡುತ್ತಿವೆ.
ಅಧಿಕಾರಿಗಳು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ಒದಗಿಸಿದ್ದು, ತುರ್ತು ನಿಯಂತ್ರಣ ಕೊಠಡಿ – ಶ್ರೀನಗರ: 0194-2457543, 0194-2483651, 7006058623, 24/7 ಪ್ರವಾಸಿ ಸಹಾಯ ಕೇಂದ್ರ – ಪೊಲೀಸ್ ನಿಯಂತ್ರಣ ಕೊಠಡಿ, ಅನಂತನಾಗ್: 9596777669, 01932-225870, ವಾಟ್ಸಾಪ್: 9419051940, ಜಮ್ಮು ಮತ್ತು ಕಾಶ್ಮೀರ ಪ್ರವಾಸಿ ಇಲಾಖೆ: 8899931010, 8899941010, 9906663868ನ್ನು ಸಂಪರ್ಕಿಸಬಹುದಾಗಿದೆ.