ಕುಂದಾಪುರ: ಸಂಸ್ಕಾರದೊಂದಿಗಿನ ಶಿಕ್ಷಣದಿಂದ ಜೀವನ ಪೂರ್ಣ – ಕೆ ಜಯಪ್ರಕಾಶ್ ಹೆಗ್ಡೆ
ಸುಜ್ಞಾನ ಎಜ್ಯುಕೇಶನ್ ವತಿಯಿಂದ ಏಳು ದಿನಗಳ ಮಂಥನ ಬೇಸಿಗೆ ಶಿಬಿರ ಉದ್ಘಾಟನೆ

ಕುಂದಾಪುರ: ಪರಸ್ಪರ ಗೌರವ, ಪ್ರೀತಿ ವಿಶ್ವಾಸಗಳನ್ನು ಹಂಚಿಕೊಂಡಾಗ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮನೆ ಮಾಡುತ್ತದೆ ಎಂದು ಕರ್ನಾಟಕ ಮಾಜೀ ಸಚಿವ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ ಪದವಿ ಪೂರ್ವ ಕಾಲೇಜು ಆವರಣದ ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿ ಇಲ್ಲಿ ಏಳು ದಿನಗಳ ಬೇಸಿಗೆ ಶಿಬಿರ ” ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ನಾವು ಪರಸ್ಪರ ದ್ವೇಷಿಗಳಾಗುಗುತ್ತಿದ್ದೇವೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದರೆ ಪೋಷಕರು ಸಂಸ್ಕಾರ ನೀಡಬೇಕು. ಸಂಸ್ಕಾರಕ್ಕೆ ಕೊರತೆಯಾದರೆ ಶಿಕ್ಷಣಕ್ಕೆ ಮಹತ್ವ ಇರುವುದಿಲ್ಲ ಎಂದರು. ಸರ್ಕಾರದ ಆಡಳಿತಾತ್ಮಕ ಹುದ್ದೆಗಳಿಗೆ ನಮ್ಮೂರಿನ ಯುವಕರನ್ನು ಸಿದ್ಧಗೊಳಿಸುವ ಕೆಲಸಗಳಿಗೆ ಶಿಕ್ಷಣ ಸಂಸ್ಥೆಗಳು ಸಜ್ಜಾಗಬೇಕು ಎಂದರು.




ಚಲನಚಿತ್ರ ನಟಿ, ರೂಪದರ್ಶಿ ಸಂಗೀತ ಶೃಂಗೇರಿ ಮಾತನಾಡಿ, ನಮ್ಮ ಸಂಸ್ಕೃತಿ ನಮ್ಮ ಮಣ್ಣಿನೊಂದಿಗೆ ಸೇರಿಕೊಂಡಿದೆ. ಬಾಲ್ಯದಲ್ಲಿ ನಾವು ಮಣ್ಣಿನೊಂದಿಗೆ ಆಡುತ್ತಿದ್ದೆವು. ಇಂದು ನಮ್ಮ ಮಕ್ಕಳು ಮಣ್ಣಿನೊಂದಿಗಿನ ಸಂಬಂಧಗಳನ್ನು ವ್ಯವಹಾರಕ್ಕಷ್ಟೇ ಮೀಸಲಿಟ್ಟಿರುವುದು ವಿಶಾಧನೀಯ. ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಒಂದಾದರೂ ಸಹಾಯ ಮಾಡುವ ಪ್ರತಿಜ್ಞೆ ಮಾಡಬೇಕು ಎಂದರು.




ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ರಮೇಶ್ ಶೆಟ್ಟಿ ಮಾತನಾಡಿ, ಶಿಕ್ಷಣದ ಜೊತೆಗೆ ಮಂಥನ ಬೇಸಿಗೆ ಶಿಬಿರದ ಮೂಲಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವ ಉದ್ದೇಶ ಹೊಂದಿದೆ ಎಂದರು. ಈ ಬಾರಿಯ ಬೇಸಿಗೆ ಶಿಬಿರದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿಗೊಂಡಿದ್ದು ಏಳು ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿದೆ. ಈ ಬೇಸಿಗೆ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಬೆಳಗಿನ ಉಪಹಾರದೊಂದಿಗೆ ಮಧ್ಯಾಹ್ನದ ಊಟ ಸಹ ನೀಡಲಾಗುತ್ತಿದೆ ಎಂದರು.




ಅರುಣ್ ಕುಮಾರ್ ಹೆಗ್ಡೆ,ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ,ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.




ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ರಂಜನ್ ಶೆಟ್ಟಿ ವಂದಿಸಿದರು. ಕನ್ನಡ ಶಿಕ್ಷಕ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.