ಬೈಂದೂರು ಶಾಸಕರಿಂದ ಕುಂದಾಪುರ ಪೊಲೀಸ್ ಠಾಣೆ ಎದುರು ಆಹೋ ರಾತ್ರಿ ಧರಣಿ ಆರಂಭ
ಹಿಂದೂ ಯುವತಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದಾತನ ವಿರುದ್ಧವೇ ಪ್ರಕರಣ ದಾಖಲಿಸಿದ ಆರೋಪ

ಕುಂದಾಪುರ: ಕಳೆದ ಎರಡು ದಿನಗಳ ಹಿಂದೆ ಬಸ್ಸಿನಲ್ಲಿ ಬರುತ್ತಿದ್ದ ಹಿಂದೂ ವಿದ್ಯಾರ್ಥಿನಿಯೊಬ್ಬಳ ಜೊತೆ ಮುಸ್ಲಿಂ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಪ್ರಶ್ನಿಸಿದಾತನ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಹಿಂದೂ ಕಾರ್ಯಕರ್ತರು ಕುಂದಾಪುರ ಪೊಲೀಸ್ ಠಾಣೆಯ ಎದುರು ಆಹೋರಾತ್ರಿ ಧರಣಿ ಕುಳಿತ ಘಟನೆ ಬುಧವಾರ ರಾತ್ರಿ ನಡೆದಿದೆ.

ಘಟನೆಯ ವಿವರ: ಸೋಮವಾರ ಸಂಜೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಬಸ್ಸಿನಲ್ಲಿ ಶಿರೂರು ಮೂಲದ ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿ ಹಾಗೂ ಅದೇ ವಯಸ್ಸಿನ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅದೇ ವಯಸ್ಸಿನ ಮುಸ್ಲಿಂ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಹಿಂದೂ ವಿದ್ಯಾರ್ಥಿನಿಯ ಪಕ್ಕದಲ್ಲಿ ಮುಸ್ಲಿಂ ಯುವಕ ಕುಳಿತಿದ್ದು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನುವ ಕಾರಣಕ್ಕೆ ಅದೇ ಬಸ್ಸಿನಲ್ಲಿ ಬರುತ್ತಿದ್ದ ಸೇನಾಪುರದ ಮಹೇಶ್ ಎಂಬಾತ ವಿಡಿಯೋ ಮಾಡಿಕೊಂಡಿದ್ದಾನೆ. ಬಳಿಕ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಬಸ್ಸಿಳಿಯುತ್ತಿದ್ದಂತೆ ಮಹೇಶ್ ಹಿಂದೂ ವಿದ್ಯಾರ್ಥಿನಿಯ ಹೆಸರು ಕೇಳಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಮಹೇಶ್ ಹಾಗೂ ಮುಸ್ಲಿಂ ಯುವಕರ ನಡುವೆ ಗಲಾಟೆ ನಡೆದಿದೆ.

ವಿಚಾರ ತಿಳಿದ ಕುಂದಾಪುರ ಪೊಲೀಸರು ಸಾರ್ವಜನಿಕ ಜಾಗದಲ್ಲಿ ಶಾಂತಿ ಭಂಗ ಎನ್ನುವ ಕಾರಣಕ್ಕೆ ಸೊಮೋಟೋ ಪ್ರಕರಣ ದಾಖಲಿಸಿದ್ದರು. ಬಳಿಕ ಮಂಗಳವಾರ ಹಿಂದೂ ಯುವತಿಯ ತಾಯಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ನೀಡಿದ್ದು, ದೂರಿನಲ್ಲಿ ತನ್ನ ಮಗಳಿಗೆ ಆರೋಪಿ ಮಹೇಶ್ ಮಾನ ಹಾನಿ ಮಾಡಿದ್ದಾನೆ ಎಂದು ದೂರಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಮಹೇಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಇದರಿಂದ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ಗಮನಕ್ಕೆತಂದಿದ್ದಾರೆ. ಶಾಸಕರು ಹಾಗೂ ಹಿಂದೂ ಕಾರ್ಯಕರ್ತರು ವಿದ್ಯಾರ್ಥಿನಿ ಹಾಗೂ ಆಕೆಯ ತಾಯಿಯನ್ನು ಭೇಟಿ ಮಾಡಿದಾಗ, ಪೊಲೀಸರು ಬಲಾತ್ಕಾರವಾಗಿ ದೂರು ಬರೆಯಿಸಿಕೊಂಡಿದ್ದು, ಅವರು ಹೇಳಿದಂತೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಘಟನೆಗೆ ಸಂಬಂಧಿಸಿದಂತೆ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಎದುರು ಆಹೋ ರಾತ್ರಿ ಧರಣಿ ನಡೆಸಲು ಮುಂದಾಗಿದ್ದು, ವಿದ್ಯಾರ್ಥಿನಿಯ ತಾಯಿ ಕುಂದಾಪುರ ಪೊಲೀಸ್ ಠಾಣೆಗೆ ಬಂದು ಮತ್ತೊಂದು ದೂರು ನೀಡಿದ್ದಾರೆ. ತನ್ನ ಮಗಳು ಬಸ್ಸಿನಲ್ಲಿ ಬರುತ್ತಿದ್ದಾಗ ಮುಸ್ಲಿಂ ಯುವಕರು ಕಿರುಕುಳ ನೀಡಿದ್ದು ಅವರನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕು ಮತ್ತು ಇದನ್ನು ಪ್ರಶ್ನಿಸಿದ ಮಹೇಶ್ ನನ್ನು ಬಿಡುಗಡೆಗೊಳಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆಹೋರಾತ್ರಿ ಧರಣಿ ಕುಳಿತಿರುವ ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಧಮನಿಸುವ ಕಾರ್ಯಕ್ಕೆ ಪೊಲಿಸರು ಬಳಿಸಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಲವ್ ಜಿಹಾದ್, ಗೋಹತ್ಯೆ, ಅಕ್ರಮ ಗೋ ಸಾಗಾಟಗಳಂತಹಾ ಪ್ರಕರಣಗಳು ಹೆಚ್ಚುತ್ತಿವೆ. ಮುಸ್ಲಿಂ ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್ ಹಿಂದೂಗಳನ್ನು ಧಮನಿಸುವ ಕೆಲಸಕ್ಕೆ ಕೈ ಹಾಕಿದರೆ ಹಿಂದೂ ಸಂಘಟನೆಗಳು ಕೈಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಸಿದ್ದಲ್ಲದೇ, ಹಿಂದು ಯುವತಿಯನ್ನು ಚುಡಾಯಿಸಿದ ಮುಸ್ಲಿಂ ಯುವಕರನ್ನು ಬಂಧಿಸಿ ಕ್ರಮ ಕೈಗೊಳ್ಳುವವರೆಗೆ ಆಹೋರಾತ್ರಿ ಧರಣಿ ಮುಂದುವರೆಸುವುದಾಗಿಯೂ ಎಚ್ಚರಿಸಿದ್ದಾರೆ.